ಬೆಂಗಳೂರು, ಮಾ. 13 (DaijiworldNews/AA): ಸರ್ಕಾರವು ಕೂಡಲೇ ಒಳ ಮೀಸಲಾತಿಯ ಗೊಂದಲ ಸರಿಪಡಿಸಬೇಕೆಂದು ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂಚನೆಯಡಿ ಶೇ. 56 ಒಳ ಮೀಸಲಾತಿ ನೀಡುವಂತೆ ನಾವು ಒತ್ತಾಯಿಸುತ್ತೇವೆ. ಇದಕ್ಕೆ ಎಲ್ಲ ರೀತಿಯ ಜನಜಾಗೃತಿಗೆ ನಾವು ಸಿದ್ಧರಿದ್ದೇವೆ. ನಿನ್ನೆ ಮುನಿಯಪ್ಪನವರು 27ರಂದು ವಿಶೇಷ ಸಂಪುಟ ಸಭೆ ಮಾಡುವುದಾಗಿ ಹೇಳಿದ್ದಾರೆ. ಅದನ್ನು ಕಾದು ನೋಡುತ್ತೇವೆ. ಇಲ್ಲವಾದರೆ, ಈ ಜನಾಂಗವೇ ಎದ್ದು ನಿಂತು ಹೋರಾಟ ಮಾಡಲಿದೆ. ಈಗಾಗಲೇ ಒಂದು ದೊಡ್ಡ ಹೋರಾಟ ನಿನ್ನೆ ನಡೆದಿದೆ" ಎಂದು ತಿಳಿಸಿದರು.
ಕರ್ನಾಟಕದಲ್ಲಿ ನ್ಯಾಯಬದ್ಧ- ಕಾನೂನುಬದ್ಧ ಶೇ. 56 ಒಳ ಮೀಸಲಾತಿ ಇದ್ದು, ಅದು ಶಿಕ್ಷಣ ಕ್ಷೇತ್ರದಲ್ಲಿ 4 ವರ್ಷಗಳಿಂದ ಸಿಗುತ್ತಿದೆ. ಎಂಬಿಬಿಎಸ್, ಎಂಜಿನಿಯರಿಂಗ್ ಮೊದಲಾದವುಗಳಿಗೆ ಅನುಷ್ಠಾನ ಆಗಿದೆ. ಈ ನೇಮಕಾತಿ ವೇಳೆ ಇವರು ಅದನ್ನು ಜಾರಿ ಮಾಡಬೇಕು. ಗಟ್ಟಿಯಾಗಿ ಸರಕಾರಿ ವಕೀಲರು ಇದನ್ನು ಹೇಳಲು ತಯಾರಿಲ್ಲ ಎಂದು ಟೀಕಿಸಿದರು. ಶೇ. 56 ಇಟ್ಟುಕೊಂಡು ಮೀಸಲಾತಿ ನೀಡಬೇಕು. ಸುಪ್ರೀಂ ಕೋರ್ಟ್ ಮತ್ತು ನಾಗಮೋಹನ್ ದಾಸ್ ಸಮಿತಿ ಹೇಳಿದ್ದನ್ನು ಪರಿಗಣಿಸಿ ಜಾರಿ ಮಾಡಿ" ಎಂದು ಹೇಳಿದರು.
"ಕೆಲವು ಸಮುದಾಯಗಳಿಗೆ ದೊಡ್ಡ ಅನ್ಯಾಯವಾಗಿದೆ. ಎಸ್ಸಿ, ಎಸ್ಟಿಯಡಿ ಅತ್ಯಂತ ಕೆಳಗಿರುವ ಅಲೆಮಾರಿ ಸಮುದಾಯವನ್ನು ಬಿಟ್ಟೇ ಬಿಟ್ಟಿದ್ದಾರೆ. ಅವರಿಗೆ ಮನೆ ಇಲ್ಲ; ಊರಿಲ್ಲ; ಮಠ ಇಲ್ಲ; ಕಾಡಿನಲ್ಲೇ ಇರುವವರು. ಅಂಥವರನ್ನೇ ಕೈಬಿಟ್ಟರೆ ಅರ್ಥ ಏನು? ಅವರು ಸಂಘಟಿತರಲ್ಲವೆಂದು ಅನ್ಯಾಯ ಮಾಡುತ್ತೀರಾ" ಎಂದು ಪ್ರಶ್ನಿಸಿದರು.
"ಹಿಂದೆ 5 ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿದ್ದರು. ಆ ಸಂದರ್ಭದಲ್ಲಿ ಒಳ ಮೀಸಲಾತಿ ಬೇಕೆಂದು ಆಗ್ರಹಿಸಿ ದೊಡ್ಡ ಹೋರಾಟ ನಡೆದಿತ್ತು. ಎಸ್ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ದೊಡ್ಡ ಹೋರಾಟ ನಡೆದಿತ್ತು. ಎಸ್ಸಿ ಜನಾಂಗಕ್ಕೆ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ದೊಡ್ಡ ಕೂಗು ಕೇಳಿಸಿತ್ತು" ಎಂದು ಗಮನಕ್ಕೆ ತಂದರು.
"ಎಸ್ಸಿ, ಎಸ್ಟಿಗಳಿಗೆ ಇಟ್ಟ ಅನುದಾನವನ್ನು ನೀವು ದೊಡ್ಡ ಪ್ರಮಾಣದಲ್ಲಿ ಅನ್ಯ ಉದ್ದೇಶಕ್ಕೆ ಬಳಸಿದ್ದೀರಿ. ನಿಮಗೇನೂ ಅನಿಸುವುದಿಲ್ಲ. ಇಟ್ಟ ಹಣವನ್ನು ಸಂಪೂರ್ಣ ಖರ್ಚು ಮಾಡುವುದಿಲ್ಲ. ಅದರ ಬಗ್ಗೆ ನಿಮಗೆ ಯಾವುದೇ ಜವಾಬ್ದಾರಿ ಇಲ್ಲ; ಸುಮಾರು 60 ಸಾವಿರ ಕೋಟಿಗಿಂತ ಹೆಚ್ಚು ಹಣ ಎಸ್ಸಿ, ಎಸ್ಟಿಗೆ ಇಟ್ಟದ್ದು ಅನ್ಯ ಉದ್ದೇಶಕ್ಕೆ ಉಪಯೋಗಿಸಲಾಗಿದೆ. ಇದಕ್ಕಿಂತ ದೊಡ್ಡ ಅನ್ಯಾಯ ಬೇರೆ ಬೇಕಾಗಿಲ್ಲ" ಎಂದು ಟೀಕಿಸಿದರು.
"ಒಬಿಸಿಗೆ ಇಟ್ಟಂಥ ಕಳೆದ ಬಜೆಟ್ನ 441 ಕೋಟಿ ರೂ. ಅನುದಾನದ ಎಲ್ಲ ಮೊತ್ತವನ್ನು ಜನಗಣತಿಗೆ ಕೊಟ್ಟಿದ್ದಾರೆ. ಅದು ಕೇವಲ ಹಿಂದುಳಿದ ವರ್ಗದ ಜಾತಿ ಗಣತಿಯೇ? ಎಲ್ಲ ವರ್ಗದ ಹಿಂದುಳಿಯುವಿಕೆ ಗಣತಿ ಇತ್ತು. ಅದಕ್ಕಾಗಿ ಹಣವನ್ನು ಒಬಿಸಿಯಿಂದ ಯಾಕೆ ಕೊಟ್ಟಿದ್ದೀರಿ? ರಾಜ್ಯದ ಬೊಕ್ಕಸದಿಂದ ಕೊಡಬೇಕಿತ್ತಲ್ಲವೇ" ಎಂದು ಕೇಳಿದರು.
"ನಿಗಮಗಳಿಗೆ ಬಜೆಟ್ನಲ್ಲಿ ಇಟ್ಟ ಹಣವನ್ನು ಖರ್ಚು ಮಾಡಿಲ್ಲ; ಒಂದೇ ಒಂದು ಗಂಗಾ ಕಲ್ಯಾಣ ಕೊಟ್ಟಿಲ್ಲ ಎಂದು ಎಸ್ಸಿ, ಎಸ್ಟಿ ಶಾಸಕರೇ ದೂರು ಕೊಟ್ಟಿದ್ದಾರೆ. ಈ ಮನೋಧೋರಣೆ ಯಾಕೆ ಎಂದು ಕೇಳಿದ ಅವರು, ಈಗ ಬಂದಿರುವ ಒಳ ಮೀಸಲಾತಿ ಸಂಬಂಧ ಮತ್ತೆ ಗೊಂದಲ ಸೃಷ್ಟಿಸಿದ್ದಾರೆ ಎಂದು ಆಕ್ಷೇಪಿಸಿದರು. ಅವರಿಗೆ ಬದ್ಧತೆ ಇಲ್ಲ; ನಿರ್ಧಾರ ಮಾಡುವ ಸ್ಪಷ್ಟತೆ ಇಲ್ಲ. ಈ ಜನಾಂಗದ ಬಗ್ಗೆ ಕಳಕಳಿ ಇಲ್ಲ" ಎಂದರು.