ಬೀದರ್, ಮಾ. 14 (DaijiworldNews/AA): ಇರಾನ್ ಮತ್ತು ಇಸ್ರೆಲ್ ವಾರ್ನಿಂದ ರಾಜ್ಯ ಸೇರಿದಂತೆ ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಎಮರ್ಜೆನ್ಸಿಗೆ ಪ್ರಧಾನಿ ಮೋದಿ ವಿದೇಶಾಂಗ ನೀತಿಯ ವೈಫಲ್ಯವೇ ಕಾರಣ ಎಂದು ಬೀದರ್ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಸಿಲಿಂಡರ್ ಎಮರ್ಜೆನ್ಸಿ ಕುರಿತು ಬೀದರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯುದ್ಧ ಪ್ರಾರಂಭವಾಗೋದಕ್ಕೂ ಮೊದಲು ಇಸ್ರೆಲ್ನಲ್ಲಿ ಏನು ಕೆಲಸ ಇತ್ತು, ಏಕಾಏಕಿ ಡೊಮೆಸ್ಟಿಕ್ ಮತ್ತು ಕಮರ್ಷಿಯಲ್ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿದ್ರಿ. ಏನು ಸಮಸ್ಯೆ ಇಲ್ಲಾ ಅಂದರೆ ಅಗತ್ಯ ಸರಕುಗಳ ಕಾಯ್ದೆ ಯಾಕೆ ಜಾರಿ ಮಾಡಿದ್ರಿ? ಈ ಎಸ್ಮಾ ಆಕ್ಟ್ ಯಾವಾಗ ಜಾರಿಯಾಗುತ್ತೆ? ಕೇಂದ್ರ ಸರ್ಕಾರಕ್ಕೆ ಏನಾಗುತ್ತಿದೆ ಅಂತಾನೆ ಗೊತ್ತಿಲ್ಲಾ, ಹೋಟೆಲ್ಗೆ ಸಿಲಿಂಡರ್ ಇಲ್ಲಾ, ಹಾಸ್ಟೆಲ್ನಲ್ಲಿ ಅಡುಗೆ ಆಗುತ್ತಿಲ್ಲಾ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಫ್ಯಾಕ್ಟರಿಗಳು ಕೂಡಾ ನಿಂತೋಗಿದ್ದು ಪುಣೆಯ ಟಾಟಾ ಕಾರ್ ತಯಾರಿಕೆ 60%ನಷ್ಟು ನಿಂತೋಗಿದೆ. ಇದಕ್ಕೆಲ್ಲಾ ಯಾರು ಹೊಣೆ, ಬೇರೆ ದೇಶದಲ್ಲಿ ಆಗುತ್ತಿಲ್ಲಾ, ನಮ್ಮ ದೇಶದಲ್ಲೇ ಮಾತ್ರ ಯಾಕೆ ಆಗುತ್ತಿದೆ? ಯುದ್ಧ ನಮ್ಮ ದೇಶದಲ್ಲಿ ನಡೆಯುತ್ತಿದೆಯಾ? ಇರಾನ್ನಿಂದ ಕಚ್ಛಾ ತೈಲ ತುಂಬಿಕೊಂಡು ರಷ್ಯಾ ಮತ್ತು ಚೀನಾ ಹಡಗುಗಳು ಹೋಗುತ್ತಿವೆ, ಆದ್ರೆ ನಮ್ಮ ಹಡಗಿನ ಬಗ್ಗೆ ಮಾಹಿತಿ ಇಲ್ಲಾ. ಟ್ರಂಪ್ ಸೇರಿದಂತೆ ಎಲ್ಲರನ್ನೂ ಮೋದಿ ಬೆಸ್ಟ್ ಫ್ರೆಂಡ್ ಅಂತಾರೆ, ಬಿಜೆಪಿ ಸಿಲಿಂಡರ್ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ನೀವೆ ಸಿಲಿಂಡರ್ ಬುಕ್ ಮಾಡಿ" ಎಂದು ವಾಗ್ದಾಳಿ ನಡೆಸಿದರು.
"ಈ ಹಿಂದೆ 24 ಗಂಟೆಗಳಲ್ಲಿ ಸಿಲಿಂಡರ್ ಸಿಗುತ್ತಿತ್ತು. ಆದರೆ ಇದೀಗ ಸಿಗುತ್ತಿದೆಯಾ? ಸಮಸ್ಯೆ ಇದ್ರು ಕಣ್ಣುಮುಚ್ಚಿಕೊಂಡು ಕುಳಿತ್ರೆ ಬಗೆಹರಿಯಲ್ಲಾ, ಬಿಜೆಪಿ ನಾಯಕರು ಮೋದಿ ಗುಣದಾನ ಮಾಡಿದ್ರೆ ಅವರಿಗೆ ಪ್ರೊಮೋಷನ್ ಸಿಗುತ್ತೆ" ಎಂದರು.