ಬೆಂಗಳೂರು, ಮಾ. 16 (DaijiworldNews/AK):ಸರ್ಕಾರಿ ಶಾಲೆಗಳಲ್ಲಿ ಹೆರಿಗೆಗೆ ಹೋಗುವ ಶಿಕ್ಷಕಿಯರಿಗೆ 15 ದಿನ ಮುಂಚೆಯೇ ರಜೆ ಕೊಡುವ ನಿಯಮ ಜಾರಿ ಮಾಡುತ್ತಿರುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಸತೀಶ್ ಪ್ರಶ್ನೆ ಕೇಳಿದರು. ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕಿಯರಿಗೆ ಶಿಶುಪಾಲನಾ ರಜೆ ಸರಿಯಾಗಿ ಕೊಡ್ತಿಲ್ಲ. ಬೇಗ ಹೆರಿಗೆಯಾದ ಶಿಕ್ಷಕಿಗೆ ರಜೆ ವಿಸ್ತರಣೆಯನ್ನ ಮಾಡಿ ಅಂತ ಹೇಳಿದ್ದರೂ ಕೂಡ ಯಲಬುರ್ಗಾದಲ್ಲಿ ಅಧಿಕಾರಿಗಳು ಮಾಡಿಲ್ಲ. ನಾವು ಮಾನವೀಯತೆ ಇಟ್ಟುಕೊಂಡು ಕೆಲಸ ಮಾಡಬೇಕು. ಶಿಶುಪಾಲನೆ ರಜೆ ಸರಿಯಾಗಿ ಅನುಷ್ಠಾನ ಮಾಡಬೇಕು. ಅತಿಥಿ ಶಿಕ್ಷಕಿಯರಿಗೂ ಶಿಶುಪಾಲನಾ ರಜೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿ, ಎಲ್ಲಾ ಇಲಾಖೆಗಳಂತೆ ಶಿಕ್ಷಕಿಯರಿಗೂ ಶಿಶುಪಾಲನೆ ರಜೆ ನೀಡಲಾಗುತ್ತಿದೆ. ನಮ್ಮ ಶಿಕ್ಷಕರನ್ನ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡ್ತೀವಿ. ಶಿಕ್ಷಕರ ಕೊರತೆ ಹಿನ್ನಲೆಯಲ್ಲಿ ಈ ವರ್ಷ ಡೆಪ್ಯೂಟೇಷನ್ ಮಾಡಿಲ್ಲ. ಇಂತಹ ಕೇಸ್ನಲ್ಲಿ ಶಿಶುಪಾಲನಾ ರಜೆಯನ್ನ ಮಾನವೀಯತೆ ದೃಷ್ಟಿಯಿಂದ ಕೊಡಬೇಕು. ಇನ್ನು ಮುಂದೆ ಹೆರಿಗೆಗೆ ಹೋಗೋ 15 ದಿನ ಮುಂಚೆ ಶಿಕ್ಷಕಿಯರಿಗೆ ರಜೆ ಕೊಡಬೇಕು ಅಂತ ನಿಯಮ ಮಾಡುತ್ತಿದ್ದೇವೆ. ಡೆಲಿವರಿ ಆದ ಮೇಲೆ ರಜೆ ಮುಗಿಸಿಕೊಂಡು ಬಂದ 5 ವರ್ಷ ಅವರು ಕೇಳೋ ಕಡೆ ನಿಯಮದ ಅನ್ವಯ ವರ್ಗಾವಣೆ ಮಾಡ್ತೀವಿ ಎಂದು ತಿಳಿಸಿದ್ದಾರೆ.