ಚೆನ್ನೈ, ಮಾ. 31 (DaijiworldNews/AA): ಮಾದರಿ ನೀತಿ ಸಂಹಿತೆ ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ನಟ ವಿಜಯ್ ಮತ್ತು ಟಿವಿಕೆ ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಟಿವಿಕೆ ಮುಖ್ಯಸ್ಥ, ನಟ-ರಾಜಕಾರಣಿ ವಿಜಯ್ ಸೋಮವಾರ ಚೆನ್ನೈನ ಪೆರಂಬೂರು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ಸಾವಿರಾರು ಬೆಂಬಲಿಗರು ಅವರನ್ನು ನೋಡಲು ಜಮಾಯಿಸಿ ವಾಹನವನ್ನು ಹಿಂಬಾಲಿಸಿದರು. ಟಿವಿಕೆ ಮುಖ್ಯಸ್ಥ ಮತ್ತು ಅವರ ಪಕ್ಷದ ಕಾರ್ಯಕರ್ತರ ಮೇಲೆ ಚುನಾವಣೆಗೆ ನಗರದಲ್ಲಿ ಪ್ರಚಾರದ ಸಮಯದಲ್ಲಿ ಎಂಸಿಸಿ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಸೇರಿದಂತೆ ಬಿಎನ್ಎಸ್ 2023 ರ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಚೆನ್ನೈನ ಪೆರಂಬೂರಿನ ಪೆರವಲ್ಲೂರು ಪೊಲೀಸ್ ಠಾಣೆಯಲ್ಲಿ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಆರೋಪದ ಮೇಲೆ ವಿಜಯ್ ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೆರವಲ್ಲೂರು ಪೊಲೀಸರು ಬಿಎನ್ಎಸ್ 2023, ಎನ್ಎಸ್ 126 (2) ಸ್ವಯಂಪ್ರೇರಣೆಯಿಂದ ವಿಚಾರಣೆಗೆ ಅಡ್ಡಿಪಡಿಸಿದ ಸೆಕ್ಷನ್, ಬಿಎನ್ಎಸ್ ಸೆಕ್ಷನ್ 189 (2), 223 ಬಿಎನ್ಎಸ್ 3(ಎ) ಮತ್ತು 3 (5) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಚುನಾವಣಾ ಪ್ರಚಾರ ನಡೆಸಲು ಅಧಿಕಾರಿಗಳು ಅನುಮತಿ ನೀಡಿದ ಸಮಯಕ್ಕಿಂತ ಮೊದಲು ಪಕ್ಷದ ಕಾರ್ಯಕರ್ತರು ಒಟ್ಟುಗೂಡುವುದು, ಇದರಿಂದಾಗಿ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪ ಮಾಡಲಾಗಿದೆ.