ಮಹಾರಾಷ್ಟ್ರ, ಏ. 02 (DaijiworldNews/AK): ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದಕ್ಕೆ ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ ತಮ್ಮ ಹೆತ್ತವರ ಈಡೇರದ ಕನಸುಗಳನ್ನು ನನಸಾಗಿಸುವವರ ಯಶಸ್ಸು ಮತ್ತಷ್ಟು ವಿಶೇಷವಾಗುತ್ತದೆ. ತಂದೆಯ ಯುಪಿಎಸ್ಸಿ ಕನಸನ್ನು ನನಸಾಗಿಸಲು ಎಂಬಿಬಿಎಸ್ ಓದನ್ನು ತೊರೆದ ಅಧಿಕಾರಿ ಮಾನ್ಸಿ ಸೋನಾವಾನೆ . ಅವರ ವಿಶೇಷ ಸಾಧನೆ ಕುರಿತು ಇಲ್ಲಿದೆ.

ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿಯಾಗಿರುವ ಮಾನ್ಸಿ ಸೋನಾವಾನೆ ತನ್ನ ಶಾಲಾ ಶಿಕ್ಷಣವನ್ನು ನಾಸಿಕ್ನಲ್ಲಿ ಪೂರ್ಣಗೊಳಿಸಿದರೆ, ಔರಂಗಾಬಾದ್ನ ಸರ್ಕಾರಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದುಕೊಂಡರು.
ಮಾನ್ಸಿಯ ತಂದೆ ಅಕೌಂಟೆಂಟ್. ಅವರು ಸ್ವತಃ ನಾಗರಿಕ ಸೇವೆಗಳಿಗೆ ಸೇರಲು ಬಯಸಿದ್ದರು. ಆದರೆ ಅವರು ಯಶಸ್ವಿಯಾಗಲಿಲ್ಲ. ಅವರ ಮಗಳು ಮಾನ್ಸಿ 12ನೇ ತರಗತಿಯ ನಂತರ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ನಲ್ಲಿ ತೇರ್ಗಡೆ ಹೊಂದಿ ಎಂಬಿಬಿಎಸ್ಗೆ ಪ್ರವೇಶ ಪಡೆಯುತ್ತಿದ್ದರು. ಆದರೆ ತನ್ನ ತಂದೆಯ ನನಸಾಗದ ಕನಸನ್ನು ನನಸಾಗಿಸಲು, ಆಕೆ ಎಂಬಿಬಿಎಸ್ ತೊರೆದು ಆರ್ಟ್ಸ್ಗೆ ಪ್ರವೇಶ ಪಡೆದು ಸಿವಿಲ್ ಸರ್ವಿಸಸ್ಗೆ ತಯಾರಿ ಆರಂಭಿಸಿದರು.
ಮಾನ್ಸಿ ತನ್ನ ಪದವಿಯ ನಂತರ ನಾಗರಿಕ ಸೇವೆಗಳಿಗೆ ತಯಾರಿ ಆರಂಭಿಸಿದರು. ಮಾನ್ಸಿ ಪದವಿ ಮುಗಿದ ಕೂಡಲೇ UPSC ಪರೀಕ್ಷೆಗೆ ಹಾಜರಾಗಿದ್ದರು. ಮೊದಲ ವರ್ಷದಲ್ಲಿ ಪರೀಕ್ಷೆಯನ್ನು ಅರ್ಥಮಾಡಿಕೊಂಡ ನಂತರ ಕೆಲವು ತಪ್ಪುಗಳನ್ನು ಮಾಡಿದ ಕಾರಣ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಎರಡು ಬಾರಿಯ ತನ್ನ ತಪ್ಪುಗಳಿಂದ ಪಾಠ ಕಲಿತು ಮೂರನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು.
UPSC 2021 ಬ್ಯಾಚ್ನಲ್ಲಿ 627 ನೇ ರ್ಯಾಂಕ್ ಗಳಿಸಿದ ಮಾನ್ಸಿ ಭಾರತೀಯ ರಕ್ಷಣಾ ಖಾತೆಗಳ ಸೇವೆಯಲ್ಲಿ ಡಿಫೆನ್ಸ್ ಅಕೌಂಟೆಂಟ್ ಆಗಿ ಆಯ್ಕೆಯಾದರು. ವೈಫಲ್ಯದ ನಂತರವೂ ಬಿಡಬಾರದು, ಬದಲಿಗೆ ನಾವು ಪ್ರಯತ್ನಿಸುತ್ತಲೇ ಇರಬೇಕು, ಒಂದು ದಿನ ನಾವು ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತೇವೆ ಎಂದು ಮಾನ್ಸಿಯ ಕಥೆ ಸ್ಪೂರ್ತಿಯಾಗಿದೆ.