ನವದೆಹಲಿ, ಏ. 13 (DaijiworldNews/TA): ಕೆಲವು ಯಶಸ್ಸಿನ ಕಥೆಗಳು ಕೇವಲ ಪರಿಶ್ರಮದಿಂದ ಮಾತ್ರ ಬರೆಯಲಾಗುವುದಿಲ್ಲ, ಅವು ಕಣ್ಣೀರು, ನೋವು ಮತ್ತು ಅಚಲ ಸಂಕಲ್ಪದಿಂದ ನಿರ್ಮಾಣವಾಗುತ್ತವೆ. ಒಡಿಶಾದ ತಲ್ಚರ್ ಎಂಬ ಸಣ್ಣ ಪಟ್ಟಣದ ನಿವಾಸಿ ಅನಿಮೇಶ್ ಪ್ರಧಾನ್ ಅವರ ಕಥೆ ಕೂಡ ಅದಕ್ಕೆ ಜೀವಂತ ಉದಾಹರಣೆ.

ನಾಗರಿಕ ಸೇವೆಗಳ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಸಮಯದಲ್ಲಿ, ಅನಿಮೇಶ್ ಅವರ ಮನೆ ಪುಸ್ತಕಗಳ ಜೊತೆಗೆ ಔಷಧಿಗಳ ವಾಸನೆಯಿಂದ ಕೂಡಿತ್ತು. ಒಂದು ಕಡೆ ಅವರು ತಮ್ಮ ಜೀವನದ ಅತಿದೊಡ್ಡ ಗುರಿ ಗಾಗಿ ಹೋರಾಡುತ್ತಿದ್ದರೆ, ಮತ್ತೊಂದು ಕಡೆ ಅವರ ತಾಯಿ ಕ್ಯಾನ್ಸರ್ ವಿರುದ್ಧ ಜೀವಮರಣದ ಹೋರಾಟ ನಡೆಸುತ್ತಿದ್ದರು.
ತಂದೆಯನ್ನು ಈಗಾಗಲೇ ಕಳೆದುಕೊಂಡಿದ್ದ ಅನಿಮೇಶ್ ಅವರಿಗೆ ತಾಯಿಯೇ ಎಲ್ಲವೂ ಆಗಿದ್ದರು. ತಾಯಿಗೆ ನೀಡಿದ ಒಂದು ಮಾತು “ನಾನು ಐಎಎಸ್ ಅಧಿಕಾರಿಯಾಗುತ್ತೇನೆ” ಎಂಬುವುದು ಅವರ ಬದುಕಿನ ದೊಡ್ಡ ಪ್ರೇರಣೆ ಆಗಿತ್ತು. ಇಂಡಿಯನ್ ಆಯಿಲ್ ಕಾರ್ಪೊರೇಷನ್ನಲ್ಲಿ ಪೂರ್ಣಕಾಲಿಕ ಕೆಲಸ ಮಾಡುತ್ತಾ, ತಾಯಿಯ ಕಿಮೋಥೆರಪಿಗಾಗಿ ಆಸ್ಪತ್ರೆಗೆ ಓಡಾಟ, ಮತ್ತು ರಾತ್ರಿ ಹೊತ್ತು ಅಧ್ಯಯನ, ಇವೆಲ್ಲವನ್ನು ಒಂದೇ ಸಮಯದಲ್ಲಿ ನಿಭಾಯಿಸುವುದು ಅಸಾಧ್ಯವೆನಿಸಬಹುದು. ಆದರೆ ಅನಿಮೇಶ್ ಪ್ರಧಾನ್ ಹಿಂದೆ ಸರಿಯಲಿಲ್ಲ.
ಬೆಳಗ್ಗೆ 6 ಗಂಟೆಗೆ ಎದ್ದು ಓದು, ನಂತರ ಕಚೇರಿ ಕೆಲಸ, ಮತ್ತೆ ರಾತ್ರಿ ಪುಸ್ತಕಗಳಲ್ಲಿ ಮುಳುಗುವುದು, ಇದು ಅವರ ದಿನಚರಿ. ಪ್ರಯಾಣದ ಸಮಯವನ್ನು ಉಳಿಸಲು ಅವರು ಕಚೇರಿಯ ಹತ್ತಿರವೇ ವಾಸ್ತವ್ಯ ಮಾಡಿಕೊಂಡಿದ್ದರು. ಈ ನಿಯಮಿತ ಶ್ರಮವೇ ಅವರನ್ನು 2023ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ್ಯಾಂಕ್ 2 ಪಡೆಯುವಂತೆ ಮಾಡಿತು.
ಆದರೆ ಅವರ ಬದುಕಿನ ಅತ್ಯಂತ ಕಠಿಣ ಘಟ್ಟ ತಾಯಿಗೆ ಕ್ಯಾನ್ಸರ್ ದೃಢಪಟ್ಟಾಗ ಪ್ರಾರಂಭವಾಯಿತು. ಪ್ರತಿಯೊಂದು ವೀಡಿಯೊ ಕಾಲ್ ಕೂಡ ಕೊನೆಯದಾಗಬಹುದು ಎಂಬ ಭಯದಲ್ಲಿ ಅವರು ಸ್ಕ್ರೀನ್ಶಾಟ್ ತೆಗೆದುಕೊಳ್ಳುತ್ತಿದ್ದರು. “ನಾಳೆ ಏನಾಗುತ್ತದೆ ಎಂಬುದು ಗೊತ್ತಿಲ್ಲ” ಎಂಬ ಭಾವನೆ ಅವರ ಮನಸ್ಸನ್ನು ಕಾಡುತ್ತಿದ್ದರೂ, ಅವರು ತಮ್ಮ ಗುರಿಯಿಂದ ಹಿಂದೆ ಸರಿಯಲಿಲ್ಲ.
ತಂದೆಯ ನೆನಪುಗಳು ಕೂಡ ಅವರಿಗೆ ದೊಡ್ಡ ಶಕ್ತಿಯಾಗಿದ್ದವು. ಬಾಲ್ಯದಲ್ಲಿ ತಂದೆ ಜೊತೆ ಕಳೆದ ಕ್ಷಣಗಳು, ಅವರ ಪ್ರೋತ್ಸಾಹ ಎಲ್ಲವೂ ಅನಿಮೇಶ್ ಅವರ ಹೋರಾಟಕ್ಕೆ ಪ್ರೇರಣೆ ನೀಡಿದವು. ಇಂದು ಅವರು ದೇಶದ ಎರಡನೇ ಟಾಪರ್ ಆಗಿದ್ದರೂ, ಆ ಸಂತೋಷವನ್ನು ಹಂಚಿಕೊಳ್ಳಲು ತಂದೆ-ತಾಯಿ ಇಬ್ಬರೂ ಅವರ ಜೊತೆ ಇಲ್ಲ ಎಂಬುದು ಅವರ ಜೀವನದ ಭಾವನಾತ್ಮಕ ನೋವಾಗಿದೆ.
ಅನಿಮೇಶ್ ಪ್ರಧಾನ್ ಅವರ ಯಶಸ್ಸಿನ ಮಂತ್ರ ಸರಳ, “ಬಲವಾದ ಕಾರಣ ಇದ್ದರೆ, ಹೇಗೆ ಎಂಬುದು ಸ್ವತಃ ಸಿಗುತ್ತದೆ.” ಒಂಟಿ ಪ್ರಯಾಣವಾಗಿರುವ UPSC ತಯಾರಿಯಲ್ಲಿ, ತಮ್ಮ ಮನಸ್ಸನ್ನು ಸಮತೋಲನದಲ್ಲಿ ಇಡಲು ಅವರು ಡೈರಿ ಬರೆಯುವುದು, ನೃತ್ಯ ಮಾಡುವುದು, ಅಡುಗೆ ಮಾಡುವಂತಹ ಸಣ್ಣ ಹವ್ಯಾಸಗಳನ್ನು ಬೆಳೆಸಿಕೊಂಡಿದ್ದರು.
ಒಟ್ಟಿನಲ್ಲಿ, ಅನಿಮೇಶ್ ಪ್ರಧಾನ್ ಅವರ ಕಥೆ ಕೇವಲ ಒಂದು ಯಶಸ್ಸಿನ ಕಥೆಯಲ್ಲ, ಅದು ತಾಯಿಯ ಕನಸು, ತಂದೆಯ ನೆನಪು ಮತ್ತು ಅಚಲ ಸಂಕಲ್ಪದ ಪ್ರತಿರೂಪವಾಗಿದೆ.