ಕೋಲ್ಕತ್ತಾ,ಏ. 24 (DaijiworldNews/AK): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಂದು (ಏ.24) ಹೂಗ್ಲಿ ನದಿಯಲ್ಲಿ ದೋಣಿ ವಿಹಾರ ನಡೆಸಿದ್ದಾರೆ.

ಏ.29ರಂದು ನಡೆಯಲಿರುವ ಎರಡನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲಿ ದೋಣಿ ವಿಹಾರ ನಡೆಸುತ್ತಿರುವ ಕೆಲವು ಫೋಟೋಗಳನ್ನು ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ಕೋಲ್ಕತ್ತಾದ ಗಂಗಾ ನದಿಯ ಉಪನದಿಯಾಗಿರುವ ಹೂಗ್ಲಿ ನದಿಯಲ್ಲಿ ಕೈಯಲ್ಲಿ ಕ್ಯಾಮರಾ ಹಿಡಿದು ದೋಣಿ ವಿಹಾರವನ್ನು ಆನಂದಿಸುತ್ತಿರುವುದು ಕಂಡುಬಂದಿದೆ.
ಪ್ರತಿಯೊಬ್ಬ ಬಂಗಾಳಿಗನಿಗೂ, ಗಂಗಾ ನದಿ ಬಹಳ ವಿಶೇಷ ಹಾಗೂ ಪವಿತ್ರವಾದ ಸ್ಥಾನವನ್ನು ಹೊಂದಿದೆ. ಗಂಗಾ ಕೇವಲ ನದಿಯಾಗಿರದೇ ಇಲ್ಲಿನ ಸಂಸ್ಕೃತಿ, ಇತಿಹಾಸ, ಜೀವನಶೈಲಿಯನ್ನು ಎತ್ತಿತೋರಿಸುವ ಬಂಗಾಳದ ಆತ್ಮದ ಮೂಲಕ ಹರಿಯುತ್ತದೆ. ಇಲ್ಲಿನ ನೀರು ನಾಗರಿಕತೆಯ ಚೆತನ್ಯವನ್ನು ಹೊತ್ತೊಯ್ಯುತ್ತದೆ. ಇಂದು ಬೆಳಿಗ್ಗೆ ನಾನು ಕೋಲ್ಕತ್ತಾದ ಹೂಗ್ಲಿ ನದಿಯ ದಡದಲ್ಲಿ ಸ್ವಲ್ಪ ಸಮಯ ಕಳೆದು, ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸಿದೆ.
ಇದೇ ವೇಳೆ ವಿದ್ಯಾಸಾಗರ್ ಸೇತು ಹಾಗೂ ಹೌರಾ ಸೇತುವೆ ಕಣ್ತುಂಬಿಕೊಂಡೆ. ಹೂಗ್ಲಿ ನದಿಯ ದಡದಲ್ಲಿ ನಿಂತು, ಪಶ್ಚಿಮ ಬಂಗಾಳದ ಅಭಿವೃದ್ಧಿ ಮತ್ತು ಬಂಗಾಳಿಗರ ಸಮೃದ್ಧಿಗಾಗಿ ಶ್ರಮಿಸುವ ನಮ್ಮ ಭರವಸೆಯನ್ನು ಒತ್ತಿ ಹೇಳಿದ್ದೇನೆ ಎಂದು ಬರೆದುಕೊಂಡಿದ್ದಾರೆ.