ನವದೆಹಲಿ, ಜೂ. 14 (DaijiworldNews/AA): ಚಿಕ್ಕ ವಯಸ್ಸಿನಿಂದಲೂ ಓದಿನಲ್ಲಿ ಮುಂದಿರುವ ಮಕ್ಕಳೇ ಭವಿಷ್ಯದಲ್ಲಿ ದೊಡ್ಡ ಸ್ಥಾನಕ್ಕೇರುತ್ತಾರೆ ಎಂದು ಹೇಳುವುದು ತಪ್ಪು. ಕಡಿಮೆ ಅಂಕಗಳನ್ನು ತೆಗೆಯುತ್ತಿದ್ದವರು ಕೂಡ ಮುಂದೆ ಯುಪಿಎಸ್ ಸಿ ಅಂತಹ ಕಠಿಣ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನಿದರ್ಶನಗಳು ನಮ್ಮ ಮುಂದೆ ಇವೆ. ಇದಕ್ಕೆ ಬೆಸ್ಟ್ ಉದಾಹರಣೆ ಹಿಮಾಂಶು.

ದೆಹಲಿ ನಿವಾಸಿಯಾದ ಇವರು ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರು. ಪದವಿ ಬಳಿಕ ಕೆಲ ಕಾಲ ಸಾಫ್ಟ್ ವೇರ್ ಡೆವಲಪರ್ ಆಗಿ ಕೆಲಸ ಮಾಡಿದ್ದರು. ನಂತರ ಸಿವಿಲ್ ಸರ್ವೀಸ್ ಗೆ ಸೇರಲು ನಿರ್ಧರಿಸಿದ್ದರು. ಹಿಮಾಂಶು ಕೌಶಿಕ್ ತಮ್ಮ ಕಠಿಣ ಪರಿಶ್ರಮದಿಂದ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. 2017 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ UPSC ಪಾಸ್ ಮಾಡುವ ಮೂಲಕ ಐಎಎಸ್ ಅಧಿಕಾರಿ ಆಗಿದ್ದಾರೆ.
ಕೌಶಿಕ್ ಓದಿನಲ್ಲಿ ಮೊದಲಿನಿಂದಲೂ ಚುರುಕಾಗಿ ಇರಲಿಲ್ಲವಂತೆ. ಕಡಿಮೆ ಅಂಕಗಳನ್ನು ಗಳಿಸುತ್ತಿದ್ದರಂತೆ. ಈ ರೀತಿಯ ಹಿನ್ನೆಲೆಯೊಂದಿಗೆ ಯುಪಿಎಸ್ ಸಿ ಪರೀಕ್ಷೆಯನ್ನು ಪಾಸ್ ಮಾಡಿ ಕೇಂದ್ರ ಸರ್ಕಾರಿ ಹುದ್ದೆ ಪಡೆಯುವುದು ನಿಜಕ್ಕೂ ಕಷ್ಟವಾಯಿತ್ತಂತೆ. ಐಎಎಸ್ ಹಿಮಾಂಶು ಕೌಶಿಕ್ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಅವರ ತಂದೆ ಇಂಜಿನಿಯರ್, ತಾಯಿ ಸಂಸ್ಕೃತ ವಿಷಯದ ಶಿಕ್ಷಕಿ. ಹಿಮಾಂಶು ದೆಹಲಿಯಲ್ಲೇ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ. ನಂತರ ಗಾಜಿಯಾಬಾದ್ ನ ಖಾಸಗಿ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಓದಿದರು. ಅವರು ಅಧ್ಯಯನದಲ್ಲಿ ಹೆಚ್ಚು ಆಸಕ್ತಿ ತೋರಿರಲಿಲ್ಲ, ಹೀಗಾಗಿ ಎರಡು ಬಾರಿ ಪರೀಕ್ಷೆಗಳನ್ನು ಅನುತೀರ್ಣರಾಗಿದ್ದರು. ಹಿಮಾಂಶು ಬಿ.ಟೆಕ್ ನಲ್ಲಿ ಶೇ.65 ಅಂಕ ಪಡೆದಿದ್ದರು. ಹಿಮಾಂಶು ಕೌಶಿಕ್ ಪದವಿ ಮುಗಿದ ನಂತರ ಮೂರು ವರ್ಷಗಳ ಕಾಲ ಸಾಫ್ಟ್ ವೇರ್ ಡೆವಲಪರ್ ಆಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿದರು. ಆ ಸಮಯದಲ್ಲಿ ಅವರು ಸಿವಿಲ್ ಸರ್ವೀಸ್ ಗೆ ಹೋಗಲು ನಿರ್ಧರಿಸಿದ್ದರು.
UPSC ಪರೀಕ್ಷೆಯ ತಯಾರಿಯ ಆರಂಭಿಕ ದಿನಗಳಲ್ಲಿ ತೊಂದರೆ ಎದುರಿಸಬೇಕಾಯಿತು. ನಂತರ ಅವರು ಕೋಚಿಂಗ್ ಗೆ ಸೇರಿದರು.ಹಿಮಾಂಶು ಕೌಶಿಕ್ ಅವರ ಕಠಿಣ ಪರಿಶ್ರಮ ಮತ್ತು ತರಬೇತಿ ಮಾರ್ಗದರ್ಶನದಿಂದಾಗಿ UPSC ಪರೀಕ್ಷೆಗೆ ತನ್ನ ತಯಾರಿಯನ್ನು ಮುಂದುವರೆಸಿದರು. 2017 ರಲ್ಲಿ, ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 77 ನೇ ರ್ಯಾಂಕ್ ಗಳಿಸಿದ್ದರು ಈ ಮೂಲಕ ದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳೂ ಯಶಸ್ವಿಯಾಗಬಹುದು ಎಂದು ಸಾಬೀತುಪಡಿಸಿದ್ದರು. UPSC ಪರೀಕ್ಷೆಯ ಆಕಾಂಕ್ಷಿಗಳು ಹಿಮಾಂಶು ಕೌಶಿಕ್ ಅವರ ಯಶಸ್ಸಿನಿಂದ ಬಹಳಷ್ಟು ಕಲಿಯಬಹುದು. ಪ್ರತಿಯೊಬ್ಬರೂ ತಮ್ಮ ಸ್ವಂತ ಸಾಮರ್ಥ್ಯಗಳ ಬಗ್ಗೆ ತಿಳಿದಿರಬೇಕು. ಇತರರನ್ನು ಅವಲಂಬಿಸಬಾರದು ಅಥವಾ ಇತರರ ಸಲಹೆಯ ಮೇರೆಗೆ ತನ್ನ ನಿರ್ಧಾರಗಳನ್ನು ಬದಲಾಯಿಸಬಾರದು.