ಬೆಂಗಳೂರು, ಜೂ. 17 (DaijiworldNews/AA): ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಗಾಗಿ ಜೆಡಿಎಸ್ನಿಂದ ಕಾಂಗ್ರೆಸ್ ಶಾಸಕರಿಗೆ ಕರೆ ಮಾಡಿ ಸೆಳೆಯೋ ಪ್ರಯತ್ನ ನಡೆಯುತ್ತಿದೆ ಎಂಬ ಸಿಎಂ ಡಿಕೆ ಶಿವಕುಮಾರ್ ಆರೋಪದ ವಿಚಾರವಾಗಿ ಮಾತನಾಡಿದ ಅವರು, "ನಾವೇನು ಆಪರೇಷನ್ ಮಾಡೋಣ? ನಮ್ಮದು ಸಣ್ಣ ಪಕ್ಷ. ನಮ್ಮ ಪಕ್ಷದಲ್ಲಿ, ನಮ್ಮ ಕೈಯಲ್ಲಿ ಮಾಡೋಕೆ ಏನಿದೆ? ಸರ್ಕಾರ ಅವರ ಕೈಯಲ್ಲಿದೆ. ಮ್ಯಾನ್ ಪವರ್, ಮಸಲ್ ಪವರ್, ಹಣದ ಪವರ್ ಎಲ್ಲ ಇಟ್ಟುಕೊಂಡಿದ್ದಾರೆ. ಅವರ ವಿರುದ್ಧ ನಾವು ಫೈಟ್ ಮಾಡೋಕೆ ಆಗುತ್ತಾ?" ಎಂದು ಪ್ರಶ್ನಿಸಿದ್ದಾರೆ.
"ನಮ್ಮ ಪಕ್ಷದ ಮತಗಳು ಚೆಲ್ಲಾಪಿಲ್ಲಿ ಆಗಬಾರದು. ನಮ್ಮ ಮತ ಒಟ್ಟಾಗಿ ಇರಬೇಕು ಅಂತ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಕುತಂತ್ರ ಮಾಡಿ ಗೆದ್ದೇ ಬಿಡಬೇಕು ಅನ್ನೋ ಪ್ರಶ್ನೆ ಇಲ್ಲ. ನಮ್ಮ ಅಭ್ಯರ್ಥಿ ಅರ್ಜಿ ಹಾಕುವಾಗ ಆತ್ಮಸಾಕ್ಷಿಯಿಂದ ಮತ ಕೊಡಿ ಅಂತ ಕೇಳಿದ್ದಾರೆ. ಇದನ್ನ ಹೊರತುಪಡಿಸಿ ಇನ್ನೇನಿದೆ. ನಮ್ಮ ವೋಟ್ ಜೊತೆ ಬಿಜೆಪಿ ವೋಟ್ ಇದೆ. ಅದಕ್ಕೆ ಮನವಿ ಮಾಡಿದ್ದೇವೆ. ನಮ್ಮ ವೋಟ್ ಭದ್ರ ಮಾಡೋಕೆ ಅಭ್ಯರ್ಥಿ ಹಾಕಿದ್ದೇವೆ" ಎಂದು ತಿಳಿಸಿದರು.