ನವದೆಹಲಿ, ಆ. 05 (DaijiworldNews/AA): ವಾಹನಗಳಿಗೆ ಥರ್ಡ್ ಪಾರ್ಟ್ ಇನ್ಷೂರೆನ್ಸ್ ಇದ್ದರೆ ಮಾತ್ರ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಸಿಗುತ್ತದೆ. ಇಂಥದ್ದೊಂದು ಕಾನೂನು ರೂಪಿಸಲು ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ನಿರ್ದೇಶನ ನೀಡಿದೆ. ದೇಶದಲ್ಲಿ ರಸ್ತೆಗಿಳಿಯುವ ಶೇ. 56ರಷ್ಟು ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆಯೇ ಇಲ್ಲ ಎನ್ನುವ ವಿಚಾರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪೀಠ, ಪ್ರಾಯೋಗಿಕವಾಗಿ ಈ ಕಾನೂನು ತರುವಂತೆ ಆದೇಶ ನೀಡಿದೆ.
ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜಂಟಿಯಾಗಿ ಪೆಟ್ರೋಲ್ ಪಂಪ್ಗಳಲ್ಲಿ ವಾಹನಗಳ ಇನ್ಶೂರೆನ್ಸ್ ತಪಾಸಣೆ ಮಾಡುವ ಪೈಲಟ್ ಯೋಜನೆಯನ್ನು ಸಿದ್ಧಪಡಿಸಬೇಕು. ಮಾನ್ಯವಾಗಿರುವ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದಿದ್ದರೆ ಪೆಟ್ರೋಲ್ ನೀಡಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನಿಮ್ಮ ವಾಹನ ಅಪಘಾತವಾಗಿ ಬೇರೆಯವರಿಗೆ ಹಾನಿಯಾದಾಗ ಆ ನಷ್ಟ ಭರಿಸುವ ವಿಮೆಯೇ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಆಗಿದೆ. ಉದಾಹರಣೆಗೆ, ವಾಹನ ಅಪಘಾತವಾದಾಗ ನಿಮ್ಮ ವಾಹನದಿಂದ ಇನ್ನೊಬ್ಬರಿಗೆ ಗಾಯವಾದರೆ, ಅಥವಾ ಸಾವಾದರೆ, ಅಥವಾ ಪ್ರಾಪರ್ಟಿಗೆ ಹಾನಿಯಾದರೆ ಅದನ್ನು ಥರ್ಡ್ ಪಾರ್ಟಿ ಇನ್ಶೂರೆನ್ಸ್ನಲ್ಲಿ ಕವರೇಜ್ ಸಿಗುತ್ತದೆ. ಈ ಮೂಲಕ ವಾಹನ ಅಪಘಾತ ಸಂಭವಿಸಿದಾಗ ಸಂತ್ರಸ್ತರು ಅಥವಾ ಅವರ ಕುಟುಂಬಸ್ಥರು ಪರಿಹಾರಕ್ಕಾಗಿ ವರ್ಷಗಟ್ಟಲೆ ಕೋರ್ಟ್ ಅಲೆದಾಡುವುದನ್ನು ತಪ್ಪಿಸಬಹುದುದಾಗಿದೆ.