ನವದೆಹಲಿ, ಆ. 13 (DaijiworldNews/AK): ಸಂಸತ್ತಿನ ಮುಂಗಾರು ಅಧಿವೇಶನದ ಕಲಾಪಗಳಿಗೆ ಅಡಚಣೆಯಾಗಲು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಅಹಂಕಾರ ಮತ್ತು ಬೇಜವಾಬ್ದಾರಿತನದ ನಡವಳಿಕೆಯೇ ಕಾರಣ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಮುಂಗಾರು ಅಧಿವೇಶನದ ಕಲಾಪಗಳು ವ್ಯರ್ಥವಾದ ಕುರಿತು ರಾಹುಲ್ ಗಾಂಧಿ ಅವರ ಧೋರಣೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ರಾಹುಲ್ ಗಾಂಧಿಯ ಅತ್ಯಂತ ಬೇಜವಾಬ್ದಾರಿತನದ ನಡವಳಿಕೆಯಿಂದಾಗಿ, ಅಂತಿಮವಾಗಿ ಅಂಗೀಕಾರಗೊಂಡ ವಿಧೇಯಕಗಳನ್ನು ಹೊರತುಪಡಿಸಿ, ನಡೆಯಬೇಕಿದ್ದ ಅರ್ಥಪೂರ್ಣ ಚರ್ಚೆಗಳು ಮತ್ತು ರಚನಾತ್ಮಕ ಕೆಲಸಗಳು ನಡೆಯಲಿಲ್ಲ. ಕೇವಲ ಒಬ್ಬ ವ್ಯಕ್ತಿಯ ಅಹಂಕಾರದಿಂದಾಗಿ ಇಡೀ ಅಧಿವೇಶನವೇ ಹಾದಿ ತಪ್ಪಿತು. ಇದಕ್ಕೆ ಅವರ ಅಹಂಕಾರದ ಹೊರತಾಗಿ ಬೇರೆ ಯಾವುದೇ ಕಾರಣವಿರಲಿಲ್ಲ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.
ವಿರೋಧ ಪಕ್ಷದವರು ಬೇಡಿಕೆಗಳನ್ನು ಇಡುತ್ತಾರೆ. ಆ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಾಗ ಅವರು ಚರ್ಚೆಯಿಂದ ಓಡಿಹೋಗುತ್ತಾರೆ. ಸಂಸತ್ತಿನಲ್ಲಿ ಗೃಹ ಸಚಿವರು ಉತ್ತರ ನೀಡಲಿದ್ದಾರೆ ಎಂದು ಒಂದು ವಾರದ ಹಿಂದೆಯೇ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದರು ಎಂದರು.