ಲಕ್ನೋ,,ಆ. 15 (DaijiworldNews/AK): ಉತ್ತರ ಪ್ರದೇಶದ ಸಂಭಾಲ್ನಲ್ಲಿರುವ ಅಲ್-ಹಸ್ನೈನ್ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕಾಂಕ್ರೀಟ್ ಛಾವಣಿ ಕುಸಿದು ಒಂದು ಮಗು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಧ್ವಜಾರೋಹಣ ಸಮಾರಂಭದ ನಂತರ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆಲವು ಮಕ್ಕಳು ಶಾಲೆಯ ಮುಖ್ಯ ದ್ವಾರದ ಮೇಲಿದ್ದ ಛಾವಣಿ ಹತ್ತಿದಾಗ, ತೂಕ ಹೆಚ್ಚಾಗಿ ರಚನೆ ಕುಸಿದು ಬಿದ್ದು ಅವಘಡ ಸಂಭವಿಸಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಎಸ್ಡಿಎಂ, ವೃತ್ತ ಅಧಿಕಾರಿ (ಸಿಒ) ಮತ್ತು ಸ್ಟೇಷನ್ ಹೌಸ್ ಅಧಿಕಾರಿ (ಎಸ್ಎಚ್ಒ) ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅಂಕಿತ್ ಖಂಡೇಲ್ವಾಲ್, ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೃಷ್ಣ ಕುಮಾರ್ ಬಿಷ್ಣೋಯ್ ಮತ್ತು ಮೂಲ ಶಿಕ್ಷಾ ಅಧಿಕಾರಿ (ಬಿಎಸ್ಎ) ಅಲ್ಕಾ ಶರ್ಮಾ ಕೂಡ ಸ್ಥಳದಲ್ಲಿದ್ದರು.
ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸಂಭಾಲ್ ತಹಸಿಲ್ನ ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮದಲಾ ಫತೇಪುರ್ ಗ್ರಾಮದಲ್ಲಿರುವ ಅಲ್-ಹಸ್ನೈನ್ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಯೀಮ್ ಎಂಬವರ ಪುತ್ರ ಆರು ವರ್ಷದ ನಿಜಾಮ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. 11 ವರ್ಷದ ಸೈಫ್ ಅಲಿ (7ನೇ ತರಗತಿ) ಮತ್ತು 10 ವರ್ಷದ ಶೈದಾನ (5 ನೇ ತರಗತಿ) ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದವರು ಅವಶೇಷಗಳನ್ನು ತೆಗೆದು ಮಕ್ಕಳನ್ನು ರಕ್ಷಿಸಿದ್ದಾರೆ. ಗಾಯಗೊಂಡ ಮಕ್ಕಳನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.