ಬೆಂಗಳೂರು, ಸೆ. 11 (DaijiworldNews/TA): ದಸರಾ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ಪ್ರಯಾಣಿಕರಿಗೆ ಡಿಜಿಟಲ್ ಸೌಲಭ್ಯವೊಂದನ್ನು ಪರಿಚಯಿಸಿದ್ದು, ಇನ್ಮುಂದೆ ವಾಟ್ಸಾಪ್ ಮೂಲಕವೇ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ಟಿಕೆಟ್ಗಳನ್ನು ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಟಿಕೆಟ್ಗಾಗಿ ಬಸ್ ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಕಡಿಮೆಯಾಗಲಿದೆ.

ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿ ತರುವ ಉದ್ದೇಶದಿಂದ ಸರ್ಕಾರ ‘ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್’ ಅನ್ನು ಪರಿಚಯಿಸಿದೆ. ಇದರೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ , ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಸ್ಗಳಿಗೆ ವಾಟ್ಸಾಪ್ ಟಿಕೆಟ್ ಬುಕಿಂಗ್ ಸೌಲಭ್ಯ ಆರಂಭಿಸಲಾಗಿದೆ.
ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೀಕರಿಸಿದ ‘KSRTC ಅವತಾರ್ 2.0’ ಮೊಬೈಲ್ ಆ್ಯಪ್ ಹಾಗೂ ವಾಟ್ಸಾಪ್ ಟಿಕೆಟಿಂಗ್ ಸೇವೆಯನ್ನು ಬಿಡುಗಡೆ ಮಾಡಿದರು. ‘ಒನ್ ಕರ್ನಾಟಕ ಮೊಬಿಲಿಟಿ’ ಆ್ಯಪ್ನಲ್ಲಿ ಸುರಕ್ಷಿತ ಬಳಕೆದಾರ ಪ್ರವೇಶ ವ್ಯವಸ್ಥೆ ಇರಲಿದ್ದು, ಪ್ರಯಾಣಿಕರು ತಮ್ಮ ಹಿಂದಿನ ಟಿಕೆಟ್ ಬುಕಿಂಗ್ಗಳ ವಿವರಗಳನ್ನು ವೀಕ್ಷಿಸುವುದರ ಜೊತೆಗೆ ವಹಿವಾಟುಗಳನ್ನು ನಿರ್ವಹಿಸಬಹುದಾಗಿದೆ.
ಇದೇ ವೇದಿಕೆಯ ಮೂಲಕ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು, ದೂರುಗಳ ಸ್ಥಿತಿ ಪರಿಶೀಲಿಸಲು, ಅಗತ್ಯವಿದ್ದಲ್ಲಿ ಮೇಲ್ಮನವಿ ಸಲ್ಲಿಸಲು ಹಾಗೂ ಪರಿಹಾರದ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹಂತ ಹಂತವಾಗಿ ಡಿಜಿಟಲ್ ಮಾಸಿಕ ಬಸ್ ಪಾಸ್ ಸೌಲಭ್ಯವನ್ನೂ ಪರಿಚಯಿಸಲು ಸರ್ಕಾರ ಮುಂದಾಗಿದೆ. ಇದರ ಮೂಲಕ ಆನ್ಲೈನ್ನಲ್ಲೇ ಬಸ್ ಪಾಸ್ಗಳನ್ನು ಬುಕ್, ಸ್ವೀಕರಿಸಿ ಹಾಗೂ ನಿರ್ವಹಿಸಬಹುದಾಗಿದೆ. QR ಕೋಡ್ ಆಧಾರಿತ ಡಿಜಿಟಲ್ ಪರಿಶೀಲನಾ ವ್ಯವಸ್ಥೆಯನ್ನೂ ಅಳವಡಿಸಲಾಗುತ್ತದೆ.
ಈ ನಂಬರ್ಗೆ ವಾಟ್ಸಾಪ್ ಮಾಡಿ : ವಾಟ್ಸಾಪ್ ಮೂಲಕ ಬಸ್ ಟಿಕೆಟ್ ಬುಕ್ ಮಾಡಲು ಪ್ರಯಾಣಿಕರು +91 6364940880 ಸಂಖ್ಯೆಗೆ ಸಂದೇಶ ಕಳುಹಿಸಬೇಕು. ಬಳಿಕ ಸಂವಾದಾತ್ಮಕ ವ್ಯವಸ್ಥೆಯು ಟಿಕೆಟ್ ಬುಕಿಂಗ್ನ ಪ್ರತಿಯೊಂದು ಹಂತದಲ್ಲೂ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲಿದೆ.
ವಾಟ್ಸಾಪ್ ಮೂಲಕ ಬುಕ್ ಮಾಡಿದ ಟಿಕೆಟ್ಗಳನ್ನು ಅದೇ ಸಂಖ್ಯೆಯ ಮೂಲಕ ರದ್ದುಗೊಳಿಸುವ ವ್ಯವಸ್ಥೆಯೂ ಇದೆ. ಇದಕ್ಕಾಗಿ ‘ಟಿಕೆಟ್ ರದ್ದತಿ’ ಆಯ್ಕೆಯನ್ನು ಆರಿಸಿ, ಬುಕಿಂಗ್ ವೇಳೆ ಸ್ವೀಕರಿಸಿದ PNR ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ವಹಿವಾಟು ಪಾಸ್ವರ್ಡ್ ನಮೂದಿಸಬೇಕಾಗುತ್ತದೆ. ಡಿಜಿಟಲ್ ಸೇವೆಗಳ ವಿಸ್ತರಣೆಯ ಮೂಲಕ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸುವುದು ಸರ್ಕಾರದ ಉದ್ದೇಶವಾಗಿದೆ.