ಡೆಹ್ರಾಡೂನ್, ಸೆ.12 (DaijiworldNews/AA): ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಕಾಂಗ್ರೆಸ್ ಪಕ್ಷದ ಎರಡು ಪ್ರಮುಖ ಸ್ಥಾನಗಳಿಗೆ ರಾಜೀನಾಮೆ ಘೋಷಿಸಿದ್ದಾರೆ.

2016ರಲ್ಲಿ ಉತ್ತರಾಖಂಡ ಸಬಾರ್ಡಿನೇಟ್ ಸರ್ವಿಸ್ ಸೆಲೆಕ್ಷನ್ ಕಮಿಷನ್ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ, ಜಾರಿ ನಿರ್ದೇಶನಾಲಯವು (ಇಡಿ) ತಮ್ಮ ಆಪ್ತ ಸಹಾಯಕ ಚಂದನ್ ಸಿಂಗ್ ಜೀನಾ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ, ಹರೀಶ್ ರಾವತ್ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾವತ್, "ಟಿವಿಯಲ್ಲಿ ನನ್ನ ಪಿಎ ಮನೆಯಿಂದ ದೊಡ್ಡ ಪ್ರಮಾಣದ ನಗದು ಮತ್ತು ಆಭರಣಗಳು ವಶಪಡಿಸಿಕೊಂಡಿವೆ ಎಂದು ನೋಡಿದೆ. ಸತ್ಯ ಮುಂದಿನ ದಿನಗಳಲ್ಲಿ ಬಹಿರಂಗವಾಗುತ್ತದೆ. ಜಿನಾ ನನ್ನ ಓಎಸ್ಡಿ ಆಗಿದ್ದರು ಮತ್ತು ಪಕ್ಷ ಹಾಗೂ ಸರ್ಕಾರದಲ್ಲಿ ಮುಖ್ಯ ಜವಾಬ್ದಾರಿ ನಿರ್ವಹಿಸಿದ್ದರು. ಅವರು ಸಜ್ಜನ, ಸಭ್ಯ ಮತ್ತು ಶ್ರಮಶೀಲರು. ಒಎಂಆರ್ ಹಾಳೆಗಳನ್ನು ತಿರುಚಿದ್ದಾರೆ ಎಂಬ ಆರೋಪಕ್ಕೆ ಪುರಾವೆ ಇದ್ದರೆ ನನಗೆ ನಾಚಿಕೆಯಾಗುತ್ತದೆ. ಆದರೆ ನಾನು ಈ ಆರೋಪವನ್ನು ನಂಬುವುದಿಲ್ಲ" ಎಂದು ತಿಳಿಸಿದ್ದಾರೆ.
"ರಾಜ್ಯ ಚುನಾವಣೆಗಳು ಹತ್ತಿರದಲ್ಲಿವೆ. ನಾನು ಹಿಂದೆ ತಮಾಷೆಯಾಗಿ ಹೇಳುತ್ತಿದ್ದೆ, ಸಿಬಿಐ ನನ್ನ ಬಾಗಿಲು ತಟ್ಟಿದಾಗ ಚುನಾವಣೆ ಬರುತ್ತದೆ ಎಂದು. ಈ ಬಾರಿ ನನ್ನ ಮನೆಯ ಬದಲು ಸಹೋದ್ಯೋಗಿಯ ಮನೆಯ ಬಾಗಿಲು ತಟ್ಟಿ ನಿರೂಪಣೆ ಸೃಷ್ಟಿಸಲಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ.
"ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದೆ ಮತ್ತು ರಾಹುಲ್ ಗಾಂಧಿ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅಂತಹ ಸಮಯದಲ್ಲಿ ನನ್ನ ಯಾವುದೇ ಕ್ರಮವು ಪಕ್ಷದ ಹೋರಾಟವನ್ನು ದುರ್ಬಲಗೊಳಿಸಬಾರದು. ನಾನು ಯಾವುದೇ ಸರ್ಕಾರಿ ಹುದ್ದೆ ಹೊಂದಿಲ್ಲ. ಆದರೆ ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಕಾರಿಣಿ ಸದಸ್ಯತ್ವ ಮತ್ತು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಶಾಶ್ವತ ಆಹ್ವಾನಿತ ಸ್ಥಾನಗಳಿಂದ ಕೆಳಗಿಳಿಯುತ್ತೇನೆ" ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
"ತಮ್ಮ ಸರ್ಕಾರ ಅಧೀನ ಸೇವೆಗಳ ಆಯ್ಕೆ ಆಯೋಗವನ್ನು ರಚಿಸಿ, ಸಾರ್ವಜನಿಕ ಸೇವಾ ಆಯೋಗವನ್ನು ಸಮಯಕ್ಕೆ ಪರೀಕ್ಷೆ ನಡೆಸುವಂತೆ ಒತ್ತಾಯಿಸಿತು. ಮೂರು ವರ್ಷಗಳಲ್ಲಿ 42,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆಯೋಗದ ಅಧ್ಯಕ್ಷರನ್ನು ಹಿಂದಿನ ಸೇವಾ ದಾಖಲೆಯ ಆಧಾರದಲ್ಲಿ ನೇಮಿಸಲಾಗಿತ್ತು ಮತ್ತು ದೂರು ಬಂದ ನಂತರ ಅವರನ್ನು ತೆಗೆದುಹಾಕಲಾಗಿತ್ತು. ನಾವು ಯಾವುದೇ ತಪ್ಪು ಮಾಡಿದ್ದರೆ ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನ ಹಸ್ತಕ್ಷೇಪಕ್ಕೆ ಪುರಾವೆ ಇದ್ದರೆ ಸಿಬಿಐ, ಇಡಿ ಅಥವಾ ಪೊಲೀಸರಿಗೆ ನೀಡಿ. ನಾನು ತಪ್ಪು ಮಾಡಿದ್ದರೆ ಶಿಕ್ಷೆಗೆ ಅರ್ಹನು" ಎಂದು ಹೇಳಿದ್ದಾರೆ.