ನವದೆಹಲಿ, ಏ. 18(DaijiworldNews/AA): ಮಾವಿನಹಣ್ಣು, ಸಿಹಿತಿಂಡಿ ಮತ್ತು ಚಹಾ ಸೇವಿಸಿ ತಮ್ಮ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಆರೋಪಿಸಿದೆ.
![](https://daijiworld.ap-south-1.linodeobjects.com/Linode/img_tv247/AA-180424-kejrival.jpg)
ಕೇಜ್ರಿವಾಲ್ ಅವರು ಸಕ್ಕರೆ ಪ್ರಮಾಣ ಹೆಚ್ಚುತ್ತಿದ್ದು ಆರೋಗ್ಯ ಕಾರಣಗಳಿಗೆ ತನಗೆ ಜಾಮೀನು ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಕೇಜ್ರಿವಾಲ್ ಜಾಮೀನು ಪಡೆಯಲೆಂದೇ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮಧುಮೇಹವಿದೆ ಎಂದು ಹೇಳಿಕೊಂಡ ಕಾರಣ ಅವರಿಗೆ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆಗೆ ಅನುಮತಿ ನೀಡಲಾಗಿದೆ. ಆದರೆ ಅವರು ಮಾವಿನಹಣ್ಣು, ಸಿಹಿತಿಂಡಿಗಳು ಮತ್ತು ಸಕ್ಕರೆಯನ್ನು ಸೇವಿಸುತ್ತಿದ್ದಾರೆ ಎಂದು ಇಡಿ ಕೇಜ್ರಿವಾಲ್ ವಿರುದ್ಧ ಆರೋಪ ಮಾಡಿದೆ.
ಇನ್ನು ಕೇಜ್ರಿವಾಲ್ ಪರ ವಾದ ಮಂಡಿಸಿದ ವಕೀಲರು ಇಡಿ ಆರೋಪಗಳಿಗೆ ಆಕ್ಷೇಪ ವ್ಯಕ್ತಪಡಿಸಿ ತನಿಖಾ ಸಂಸ್ಥೆ ಈ ಆರೋಪಗಳನ್ನು ಕೇವಲ ಮಾಧ್ಯಮಗಳಿಗಾಗಿ ಮಾಡುತ್ತಿದೆ. ಪ್ರಸ್ತುತ ಅರ್ಜಿಯನ್ನು ಹಿಂಪಡೆಯುತ್ತಿದ್ದು, ಉತ್ತಮವಾದ ಅರ್ಜಿಯನ್ನು ಸಲ್ಲಿಸಲಾಗುತ್ತದೆ ಎಂದು ಹೇಳಿದರು.