ಬೆಂಗಳೂರು, ಜ. 31 (DaijiworldNews/TA): ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯು ಇಂದು ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ನಡೆದ ತೀವ್ರ ಪೈಪೋಟಿಯಲ್ಲಿ ಭಾಮಾ ಹರೀಶ್ ಅವರನ್ನು ಸೋಲಿಸಿದ ಹಿರಿಯ ನಟಿ ಜಯಮಾಲ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ಈ ಮೂಲಕ ಮುಂದಿನ ಅವಧಿಗೆ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗುವುದು ಬಹುತೇಕ ಖಚಿತವಾಗಿದೆ.

ಇಂದು ಬೆಳಿಗ್ಗೆ ಆರಂಭವಾದ ಮತದಾನದಲ್ಲಿ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಉತ್ಸಾಹದಿಂದ ಭಾಗವಹಿಸಿದ್ದರು. ನಟರಾದ ಶಿವರಾಜ್ ಕುಮಾರ್, ಡಾಲಿ ಧನಂಜಯ್, ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿದಂತೆ ಹಲವಾರು ನಟ–ನಟಿಯರು, ತಂತ್ರಜ್ಞರು ಗುರುರಾಜ ಕಲ್ಯಾಣ ಮಂಟಪಕ್ಕೆ ಆಗಮಿಸಿ ತಮ್ಮ ಮತ ಚಲಾಯಿಸಿದರು.
813 ಮತಗಳಲ್ಲಿ 512 ಮತ ಪಡೆದು ಜಯ : ಮತದಾನದೊಂದಿಗೆ ಇಂದೇ ಮತ ಎಣಿಕೆಯೂ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಚಲಾವಣೆ ಆಗಿದ್ದು, ಇದರಲ್ಲಿ ಜಯಮಾಲ ಅವರು 512 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಭಾಮಾ ಹರೀಶ್ ಹಾಗೂ ಜಯಮಾಲ ನಡುವಿನ ಪೈಪೋಟಿ ತುರುಸಾಗಿದ್ದರೂ, ಅಂತಿಮವಾಗಿ ಜಯಮಾಲ ಅವರೇ ಸ್ಪಷ್ಟ ಬಹುಮತ ಗಳಿಸಿದರು.
ಈ ಮೂಲಕ ಜಯಮಾಲ ಅವರು ಎರಡನೇ ಬಾರಿ ಫಿಲಂ ಚೇಂಬರ್ ಅಧ್ಯಕ್ಷೆ ಆಗಲಿದ್ದಾರೆ. ಇದಕ್ಕೂ ಮುನ್ನ 2008ರಲ್ಲಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದರು. ಇದೀಗ ಮತ್ತೊಮ್ಮೆ ಮಂಡಳಿಯ ನೇತೃತ್ವ ವಹಿಸಲಿದ್ದಾರೆ.
ಮತದಾನಕ್ಕೂ ಮುನ್ನ ಗದ್ದಲ : ಅಧ್ಯಕ್ಷ ಸ್ಥಾನ ಮಾತ್ರವಲ್ಲದೆ ಉಪಾಧ್ಯಕ್ಷ, ಖಜಾಂಚಿ, ಕಾರ್ಯದರ್ಶಿ, ಗೌರವ ಕಾರ್ಯದರ್ಶಿ (ವಿತರಕರ ವಲಯ) ಹಾಗೂ ಗೌರವ ಕಾರ್ಯದರ್ಶಿ (ಪ್ರದರ್ಶಕರ ವಲಯ) ಸ್ಥಾನಗಳಿಗೂ ಇಂದು ಚುನಾವಣೆ ನಡೆಯಿತು. ಫಿಲಂ ಚೇಂಬರ್ ಪಕ್ಕದಲ್ಲೇ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನ ಆಯೋಜಿಸಲಾಗಿತ್ತು. ಮತದಾನಕ್ಕೂ ಮುನ್ನ ನಡೆದ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, ಸ್ಪರ್ಧಿಗಳ ನಡುವೆ ಮೈಕ್ ಕಿತ್ತುಕೊಳ್ಳುವ ಮಟ್ಟಿಗೆ ವಾಗ್ವಾದ ನಡೆದಿದೆ.
ಇತರೆ ಪ್ರಮುಖ ಫಲಿತಾಂಶಗಳು : ಗೌರವ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುಂದರ್ ರಾಜು (ನಿರ್ಮಾಪಕರು), ಕೆ. ಮಂಜು (ವಿತರಕರು), ಕಿಶೋರ್ (ಪ್ರದರ್ಶಕರು)ಇವರುಗಳು ಗೆಲುವು ಸಾಧಿಸಿದ್ದಾರೆ.
ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಎ. ಗಣೇಶ್ (ನಿರ್ಮಾಪಕ), ರಮೇಶ್ (ವಿತರಕ), ಅಶೋಕ್ (ಪ್ರದರ್ಶಕ) ಇವರುಗಳು ಜಯಗಳಿಸಿದ್ದಾರೆ. ಇನ್ನು ಖಜಾಂಚಿ ಸ್ಥಾನಕ್ಕೆ ಜಯಸಿಂಹ ಮುಸುರಿ ಅವರು ಗೆಲುವು ಸಾಧಿಸಿದ್ದಾರೆ. ಭಾರಿ ಕುತೂಹಲ ಕೆರಳಿಸಿದ್ದ ಅಧ್ಯಕ್ಷ ಸ್ಥಾನ ಕೊನೆಗೂ ಜಯಮಾಲ ಅವರ ಪಾಲಾಗಿದ್ದು, ಫಿಲಂ ಚೇಂಬರ್ ರಾಜಕೀಯದಲ್ಲಿ ಹೊಸ ಅವಧಿಗೆ ಚಾಲನೆ ದೊರೆತಿದೆ.