Karavali
ಕುಂದಾಪುರ: 'ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಆಫ್ ಬರೋಡದಲ್ಲಿ ಸಿ.ಸಿ ಖಾತೆಗಳನ್ನ ತೆರೆಯಲಾಗಿದೆ'- ನಾಗರಾಜ ಶೆಟ್ಟಿ
- Fri, Sep 06 2024 05:15:15 PM
-
ಕುಂದಾಪುರ, ಸೆ.6(DaijiworldNews/AA): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಕುಂದಾಪುರ ತಾಲೂಕಿನಲ್ಲಿ 5029 ಪ್ರಗತಿಬಂಧು ಸ್ವಸಹಾಯ ಸಂಘಗಳನ್ನು ನಿರ್ವಹಿಸುತ್ತಿದ್ದು, 38698 ಸದಸ್ಯರಿದ್ದಾರೆ. ಈ ಸಂಘಗಳಿಗೆ ಬ್ಯಾಂಕ್ ಆಫ್ ಬರೋಡದಲ್ಲಿ ಸಿ.ಸಿ ಖಾತೆಗಳನ್ನು ತೆರೆಯಲಾಗಿದ್ದು, ಆರ್ಥಿಕ ವ್ಯವಹಾರಗಳನ್ನು ಬ್ಯಾಂಕ್ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಉಡುಪಿ ಜಿಲ್ಲಾ ನಿರ್ದೇಶಕರಾದ ನಾಗರಾಜ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೃಷಿ ಅಭಿವೃದ್ಧಿ, ಹಿಂದೂ ರುದ್ರಭೂಮಿ, ಶಾಲಾ ಕಟ್ಟಡ ರಚನೆ, ಸಮುದಾಯ ಭವನ ನಿರ್ಮಾಣ, ದೇವಸ್ಥಾನ ನವೀಕರಣ ಉದ್ದೇಶಗಳಿಗೆ ತಾಲೂಕಿಗೆ 83.79 ರೂ. ಅನುದಾನ ನೀಡಲಾಗಿದೆ. ಜ್ಞಾನದೀಪ ಕಾರ್ಯಕ್ರಮದ ಮೂಲಕ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ 851 ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ಮಂಜೂರೂಗೊಳಿಸಲಾಗಿದ್ದು ಇದಕ್ಕಾಗಿ 70.71 ಲಕ್ಷ ರೂ. ಹಾಗೂ 64 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಗೌರವ ಶಿಕ್ಷಕರ ಒದಗಿಸಲಾಗಿದ್ದು 36.34 ಲಕ್ಷ ರೂ. ವಿನಿಯೋಗಿಸಲಾಗಿದೆ ಎಂದರು.
ಸಂಪೂರ್ಣ ಸುರಕ್ಷಾ ಆರೋಗ್ಯ ವಿಮಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, 6384 ಸದಸ್ಯರಿಗೆ 953.64 ಲಕ್ಷ ರೂ. ವಿಮೆ ನೀಡಲಾಗಿದೆ. ಹಾಗೆಯೇ ಪ್ರಗತಿ ರಕ್ಷಾ ಸಾಲ ಭದ್ರತಾ ವಿಮೆಯ ಅಡಿಯಲ್ಲಿ ಮರಣ ಸಾಂತ್ವಾನವಾಗಿ 408 ಸದಸ್ಯರಿಗೆ 394.43 ಲಕ್ಷ ರೂ. ಹಾಗೂ ಮೈಕ್ರೋ ಬಚತ್ ಕಿರು ವಿಮಾ ಯೋಜನೆಯಲ್ಲಿ 64 ಸದಸ್ಯರಿಗೆ 86.22 ಲಕ್ಷ ರೂ. ನೀಡಲಾಗಿದ್ದು ಒಟ್ಟು ಮೊತ್ತ 1518.08 ಲಕ್ಷ ರೂ. ಕ್ರೈಮ್ ನೀಡಲಾಗಿದೆ ಎಂದು ತಿಳಿಸಿದರು.
ವಿಪತ್ತು ನಿರ್ವಹಣೆ ಕಾರ್ಯಕ್ರಮದಡಿ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ 28 ವಿಪತ್ತು ನಿರ್ವಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ರಕ್ಷಣಾ ಪರಿಕರಗಳನ್ನು ಒದಗಿಸಲಾಗಿದೆ. ಪ್ರಾಕೃತಿಕ ವಿಕೋಪ ಸಂದರ್ಭ ಹಾನಿಯಾಗಿರುವ 24 ಕುಟುಂಬಗಳಿಗೆ, ತೀವ್ರ ಅನಾರೋಗ್ಯ ಪೀಡಿತ ೩೪ ಕುಟುಂಬಗಳಿಗೆ ಒಟ್ಟು ಮೊತ್ತ 11.45 ರೂ. ನೀಡಲಾಗಿದೆ ಎಂದರು.
ವಾತ್ಯಲ್ಯ ಕಾರ್ಯಕ್ರಮದ ಮೂಲಕ 225 ಅತೀ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ರೂ. 1,000/- ದಂತೆ ಒಟ್ಟು ಮೊತ್ತ ರೂ 37.65 ಲಕ್ಷ ಮಾಸಿಕ ಮಾಶಾಸನ, 3 ಕುಟುಂಬಗಳಿಗೆ 3 ವಾತ್ಸಲ್ಯ ಮನೆಗಳ ರಚನೆಗಾಗಿ ರೂ. 3 ಲಕ್ಷ ನೀಡಲಾಗಿದ್ದು, ಒಟ್ಟು ಮೊತ್ತ 40.65 ಲಕ್ಷ ರೂ. ವಿನಿಯೋಗಿಸಲಾಗಿದೆ. ಜನಮಂಗಲ ಕಾರ್ಯಕ್ರಮದಡಿಯಲ್ಲಿ ತೀವ್ರ ಅನಾರೋಗ್ಯ ಪೀಡಿತ 174 ಕುಟುಂಬಗಳಿಗೆ 174 ಜನಮಂಗಲ ಸಲಕರಣೆಗಳಾದ ವಾಟರ್ ಬೆಡ್, ವಾಕಿಂಗ್ ಸ್ಟಿಕ್, ಯು ಶೇಪ್ ವಾಕರ್, ವೀಲ್ ಚೇರ್ ಗಳನ್ನು ವಿತರಿಸಲಾಗಿದೆ ಎಂದರು.
2024-25 ನೇ ಸಾಲಿನಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ಮುಂದಾಗಿದ್ದು ತಾಲೂಕಿನಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಡಿಯಲ್ಲಿ 04 ಕೆರೆಗಳ ಪುಶ್ವೇಶ್ವೇತನಕ್ಕೆ ಅನುದಾನ ನೀಡಲಾಗುತ್ತಿದೆ. ಜ್ಞಾನದೀಪ ಕಾರ್ಯಕ್ರಮದ ಅಡಿಯಲ್ಲಿ 39 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಗೌರವ ಶಿಕ್ಷಕರ ನೇಮಾಕಾತಿ ಮಾಡಲಾಗಿದೆ.ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮದ ಅಡಿಯಲ್ಲಿ 308 ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣಕ್ಕೆ ಮಾಸಿಕ ಶಿಷ್ಯವೇತನವನ್ನು ನೀಡಲಾಗುತ್ತಿದೆ. ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ 150 ಅಸಾಹಯಕರಿಗೆ ಮಾಸಿಕ ರೂ 1,000/- ರಂತೆ ಪ್ರತೀ ತಿಂಗಳು ಮಾಶಾಸನವನ್ನು ಒದಗಿಸುವರೇ ಅನುದಾನ ಕಾಯ್ದಿರಿಸಲಾಗಿದೆ. 04 ವಾತ್ಸಲ್ಯ ಮನೆ ನಿರ್ಮಾಣಕ್ಕೆ ತಲಾ 1.40 ಲಕ್ಷ ರೂಯಂತೆ ಒಟ್ಟು 5.6 ಲಕ್ಷ ರೂ. ಅನುದಾನ ಮಂಜೂರುಗೊಂಡಿದೆ ಎಂದರು.
ಪ್ರಸ್ತುತ ವರ್ಷದಲ್ಲಿ 40 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 280 ಬೆಂಚ್ ಡೆಸ್ಕ್ ಗಳನ್ನು ಒದಗಿಸುವರೇ ರೂ 23.80 ಲಕ್ಷ ಅನುದಾನ ಕ್ಷೇತ್ರದ ವತಿಯಿಂದ ನೀಡಲಾಗುತ್ತಿದೆ. ಪ್ರಾಕೃತಿಕ ವಿಕೋಪ ಕಾರ್ಯಕ್ರಮದ ಅಡಿಯಲ್ಲಿ ಪ್ರಸ್ತುತ ವರ್ಷ ನೆರೆಬಂದು ಹಾನಿಯಾಗಿರುವ 13 ಕುಟುಂಗಳಿಗೆ 1.10 ಲಕ್ಷ ರೂ ಅನುದಾನ ನೀಡಲಾಗಿದೆ.
ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ) ಮೂಲಕ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕೇಂದ್ರ ಸರ್ಕಾರದ ಇ-ಗವರ್ನೆನ್ಸ್ ಇಂಡಿಯಾ ಲಿಮಿಟೆಡ್ ಜೊತೆ ಸಹಭಾಗಿತ್ವದಲ್ಲಿ ಸರಕಾರದ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸಲು ತಾಲೂಕಿನಲ್ಲಿ ಒಟ್ಟು 62 ಸಾಮಾನ್ಯ ಸೇವಾ ಕೇಂದ್ರಗಳನ್ನು ತೆಗೆಯಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಂತ್ರಜ್ಞಾನದ ಮೂಲಕ ಅತ್ಯಂತ ಪಾರದರ್ಶಕತೆಯನ್ನು ಅತೀ ಕಡಿಮೆ ಅವಧಿಯಲ್ಲಿ ದೊರಕಿಸಿಕೊಡುವ ಅತ್ಯಂತ ವ್ಯವಸ್ಥೆ ಆಗಿದೆ. ಒಂದು ಗ್ರಾಮ ಒಂದು ಸಿ.ಎಸ್.ಸಿ ಪರಿಕಲ್ಪನೆಯಲ್ಲಿ ಪ್ರತಿ ಗ್ರಾಮದಲ್ಲೂ ಅನುಷ್ಠಾನಿಸಲಾಗುತ್ತಿದೆ. ಪ್ರಸುತ್ತ ವರ್ಷದಲ್ಲಿ 22344 ಸೇವೆಗಳನ್ನು ಜನರಿಗೆ ತಲುಪಿಸಲಾಗಿದೆ ಎಂದರು.
ಯೋಜನೆಯು ಸಕಾರಾತ್ಮಕವಾಗಿ ಸಮಾಜದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದು ಧಾರ್ಮಿಕ ಕಾರ್ಯಕ್ರಮಗಾಳಾದ ದೇವಾಸ್ಥಾನದ ಜೀರ್ಣೋದ್ದಾರಗಳು, ಸಾಮಾಜಿಕ ಕಾರ್ಯಕ್ರಮಗಳಾದ ಶಾಲಾ ಉತ್ಸವಗಳು, ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.
ಸುದ್ಧಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಸೌಜನ್ಯ ಪ್ರಕರಣದಿಂದ ಸಾಲ ಮರುಪಾವತಿಯಲ್ಲಿ ಸಮಸ್ಯೆಯಾಗಿಲ್ಲ. ಆ ಪ್ರಕರಣಕ್ಕೂ ಯೋಜನೆಗೂ ಸಂಬಂಧವಿಲ್ಲ. ಯಾವುದೇ ಗೊಂದಲವಿಲ್ಲ. ಕೆಲವು ದುಷ್ಟಕೂಟಗಳು ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು.
ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 13.5 ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ವಾರದ ಕಂತು ಪಾವತಿಯಿಂದ ವಾರ್ಷಿಕ 6.750 ಮಾತ್ರ ಬಡ್ಡಿಯಾಗುತ್ತದೆ. 40 ವರ್ಷಗಳಿಂದ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಗುಂಪುಗಳ ಮೂಲಕ ಖಾತೆ ಇರುವುದರಿಂದ ಗುಂಪಿನ ಒಬ್ಬ ಸದಸ್ಯರು ಹಣ ಕಟ್ಟುವುದು ಬಾಕಿಯಾದರೂ ಸಹಜವಾಗಿ ಇಡೀ ಗುಂಪು ಜವಬ್ದಾರವಾಗುತ್ತದೆ ಹೇಳಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲೆ ಅಧ್ಯಕ್ಷ ಆರ್.ನವೀನಚಂದ್ರ ಶೆಟ್ಟಿ ರಟ್ಟಾಡಿ ಮಾತನಾಡಿ ಮದ್ಯವರ್ಜನ ಶಿಬಿರಗಳ ಮೂಲಕ ಹೊಸ ಕ್ರಾಂತಿಯಾಗಿದೆ. ಸಾವಿರಾರು ಮಂದಿ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಸಮಾಜದಲ್ಲಿ ಸ್ವಾಸ್ಥ್ಯವನ್ನು ಸ್ಥಾಪಿಸುವ ಕೆಲಸವಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಕುಂದಾಪುರ-1 ಯೋಜನಾಧಿಕಾರಿ ಪಾರ್ವತಿ, ಕುಂದಾಪುರ-2 ಯೋಜನಾಧಿಕಾರಿ ನಾರಾಯಣ ಪಾಲನ್ ಉಪಸ್ಥಿತರಿದ್ದರು.