ಬಂಟ್ವಾಳ, ಸೆ.9(DaijiworldNews/AA): ನವದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಬೀಕರ ಅಪಘಾತಕ್ಕೊಳಗಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಸೋಮವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಹಾಗೂ ಅವರ ಪತ್ನಿ ಮಾನಸ ಪ್ರಯಾಣಿಸುತ್ತಿದ್ದ ಕಾರು ಬಂಟ್ವಾಳದ ತಲಪಾಡಿ ಎಂಬಲ್ಲಿ ಅಪಘಾತಕ್ಕೊಳಗಾಗಿ ಮಾನಸ ಅವರು ಮೃತಪಟ್ಟಿದ್ದರು. ಈ ಅಪಘಾತ ಒಂದು ಗಂಭೀರವಾದ ಪ್ರಕರಣ ಎಂದು ಪರಿಗಣಿಸಿದ ಎಸ್.ಪಿ.ಯತೀಶ್ ಅವರು ಖುದ್ದಾಗಿ ತಲಪಾಡಿ ಸ್ಪಾಟ್ ಗೆ ಆಗಮಿಸಿ ಘಟನೆಗೆ ಕಾರಣಗಳ ಬಗ್ಗೆ ಮತ್ತು ಸಾಧ್ಯತೆಗಳ ಪ್ರಾಥಮಿಕ ಮಾಹಿತಿಗಳ ಕಲೆಹಾಕಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿನ ಬಂಟ್ವಾಳದ ಪೋಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಗಂಭೀರ ಪ್ರಕರಣವಾದ ಹಿನ್ನೆಲೆ ಘಟನಾ ಸ್ಥಳಕ್ಕೆ ಆಗಮಿಸಿದ್ದೆ. ರಸ್ತೆಯ ಸಮಸ್ಯೆಯಿಂದ ಅಪಘಾತ ಸಂಭವಿಸಿದೆಯಾ? ಅಥವಾ ಯಾವ ಕಾರಣಕ್ಕಾಗಿ ಅಪಘಾತ ನಡೆದಿರಬಹುದು ಎಂಬ ವಿಚಾರದ ಬಗ್ಗೆ ಮಾಹಿತಿ ಪಡೆಯುವ ಉದ್ದೇಶದಿಂದ ತಲಪಾಡಿ ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದ್ದೇನೆ. ಜೊತೆಗೆ ಕೆಲವೊಂದು ಮಾಹಿತಿಗಾಗಿ ಮತ್ತು ಸಂದೇಶಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆರ್.ಟಿ.ಒ. ಇಲಾಖೆಗೆ ಪತ್ರ ಬರೆದು ಸ್ಪಷ್ಟವಾದ ಉತ್ತರವನ್ನು ತಿಳಿಯಲಾಗುತ್ತದೆ ಎಂದು ಎಸ್.ಪಿ.ಯತೀಶ್ ತಿಳಿಸಿದ್ದಾರೆ.
ಈ ಸಂದರ್ಭ ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್, ಪೋಲೀಸ್ ಇನ್ಸ್ ಪೆಕ್ಟರ್ ಗಳಾದ ಅನಂತಪದ್ಮನಾಭ, ಶಿವಕುಮಾರ್ ಎಸ್.ಐ.ಸುತೇಶ್ ಹಾಜರಿದ್ದರು.