ಉಡುಪಿ, ಫೆ.19 (DaijiworldNews/AA): ಮಣೂರಿನ ರಾಷ್ಟ್ರೀಯ ಹೆದ್ದಾರಿ 66ರ ಮಧ್ಯದಲ್ಲಿ ಕಳೆದೆರಡು ದಿನಗಳಿಂದ ಕಿಡಿಗೇಡಿಗಳು ನಿರಂತರವಾಗಿ ಕಸದ ರಾಶಿ ಹಾಕುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಮಣೂರು ನಿವಾಸಿಗಳು ಆಗ್ರಹಿಸಿದ್ದಾರೆ.


ಫೆಬ್ರವರಿ 17 ರಂದು ಹೆದ್ದಾರಿಯ ಡಿವೈಡರ್ ಮಧ್ಯದಲ್ಲಿ ದೊಡ್ಡ ಕಸದ ಮೂಟೆ ಕಂಡುಬಂದಿತ್ತು. ಫೆಬ್ರವರಿ 18 ರಂದು ಅದೇ ಸ್ಥಳದಲ್ಲಿ ಇನ್ನೂ ಮೂರು ದೊಡ್ಡ ಕಸದ ಮೂಟೆಗಳು ಪತ್ತೆಯಾಗಿದ್ದು, ಕಿಡಿಗೇಡಿಗಳು ರಾತ್ರಿ ವೇಳೆ ಮತ್ತೊಮ್ಮೆ ಕಸ ಎಸೆದಿದ್ದಾರೆಂದು ತಿಳಿದುಬಂದಿದೆ.
ಈ ಕೃತ್ಯವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಥಳೀಯ ನಿವಾಸಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಘಟನೆಯನ್ನು ಖಂಡಿಸಿ, ಮಣೂರು ಪಂಚವರ್ಣ ಸಂಘಟನೆಯ ಅಧ್ಯಕ್ಷ ಮನೋಹರ್ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮಸ್ಯೆಯನ್ನು ಪರಿಶೀಲಿಸಿದ ಅವರು, ರಾಷ್ಟ್ರೀಯ ಹೆದ್ದಾರಿಯ ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುವ ಕೆಕೆಆರ್ ಕಂಪನಿ ಮತ್ತು ಕೋಟ ಗ್ರಾಮ ಪಂಚಾಯತ್ಗೆ ಮಾಹಿತಿ ನೀಡಿದ್ದಾರೆ. ಈಗಲಾದರೂ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳ ನಿರೀಕ್ಷಿಸುತ್ತಿದ್ದಾರೆ.