ಬಂಟ್ವಾಳ,ಮಾ.9(DaijiworldNews/TA): ಬಂಟ್ವಾಳ -ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ತೆಂಗಿನ ಎಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಆದಿತ್ಯವಾರ ಮುಂಜಾನೆ ಸಂಭವಿಸಿದೆ.


ಇಲ್ಲಿನ ನಿವಾಸಿ ಜಯರಾಮ ಗೌಡ ಅವರ ಮಾಲಕತ್ವದ ಐ ಗ್ರೋ ಇನ್ ಕಾರ್ಪ್ ಎಂಬ ಮಿಲ್ ಅಗ್ನಿಗಾಹುತಿಯಾಗಿದ್ದು ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯ ದ ಸೊತ್ತುಗಳು ನಾಶವಾಗಿದೆ ಎನ್ನಲಾಗಿದೆ. ಜಯರಾಮ ಅವರ ಮನೆ ಮಿಲ್ ನ ಸಮೀಪವೇ ಇದ್ದು, ಆದಿತ್ಯವಾರ ಮುಂಜಾನೆ ಸುಮಾರು ಒಂದು ಗಂಟೆಯ ಹೊತ್ತಿಗೆ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿತ್ತು. ಕೂಡಲೇ ಅವರು ಸ್ಥಳಿಯರನ್ನು ಹಾಗೂ ಅಗ್ನಿಶಾಮಕ ದಳವನ್ನು ಕರೆಸಿದ್ದರು. ಆದರೆ ಬೆಂಕಿಯ ಶಾಖ ಪ್ರಖರ ವಾಗಿದ್ದ ಕಾರಣ ಯಾರೂ ಸಮೀಪ ಹೋಗಲಾಗಿರಲಿಲ್ಲ. ಬಳಿಕ ಬಂಟ್ವಾಳ ಅಗ್ನಿ ಶಾಮಕದಳ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.
ಆದರೆ ಅದಾಗಲೇ ಮಿಲ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಮಿಲ್ ನಲ್ಲಿ ಸುಮಾರು 12 ಟನ್ ಗಳಷ್ಟು ತೆಂಗಿನ ಎಣ್ಣೆ ಹಾಗೂ ಕಚ್ಛಾ ತೆಂಗಿನಕಾಯಿ, ಮೆಷಿನರಿಗಳು ಎಲ್ಲವೂ ಸುಟ್ಟು ಕರಕಲಾಗಿದೆ ಸುಮಾರು ಮೂರು ಕೋಟಿ ರೂಪಾಯಿಯಷ್ಟು ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದೆಂದು ಜಯರಾಮ ಅವರು ತಿಳಿಸಿದ್ದಾರೆ. ಘಟನೆ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.