ಮಂಗಳೂರು, ಮಾ.09 (DaijiworldNews/AA): ಬಜಪೆ ಮೂಡು ಪೆರಾರ ಗ್ರಾಮದ ಅರ್ಕೆ ಪದವು ನಿವಾಸಿ, ನೀರುಮಾರ್ಗದ ಪ್ಯಾರಾಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಯಾಗಿರುವ ನಿತೇಶ್ ಬೆಲ್ವಡ (19) ಫೆ. 13ರಂದು ನಾಪತ್ತೆಯಾಗಿದ್ದು, ಆತ ಎಲ್ಲಿಗೆ ಹೋಗಿದ್ದಾನೆ ಎನ್ನುವ ಸುಳಿವು ಇಲ್ಲಿಯವರೆಗೆ ದೊರೆತಿಲ್ಲ.

ಇದೀಗ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ವಿಶೇಷ ತಂಡ ರಚಿಸಿ ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಪತ್ತೆ ಮಾಡುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ದಿಗಂತ್ ಎನ್ನುವ ಯುವಕ ನಾಪತ್ತೆ ಪ್ರಕರಣ ರಾಜ್ಯಮಟ್ಟದಲ್ಲಿ ಸುದ್ದಿಯಾಗಿ ಇದೀಗ ಆತ ಪತ್ತೆಯಾಗಿದ್ದಾನೆ. ಈ ಹಿನ್ನೆಲೆ ನಿತೇಶ್ನನ್ನು ಕೂಡಾ ಪತ್ತೆ ಮಾಡಬೇಕು ಎಂದು ಕುಟುಂಬ ವರ್ಗದವರು ಆಗ್ರಹಿಸಿದ್ದಾರೆ.
ನಿತೇಶ್ ಫೆ. 13ರಂದು ಕಾಲೇಜಿನಿಂದ ಮನೆಗೆ ಬಂದು ಯಾರಿಗೂ ತಿಳಿಸದೇ ಹೊರಗೆ ಹೋಗಿದ್ದು, ಮತ್ತೆ ವಾಪಸು ಮನೆಗೆ ಬಂದಿಲ್ಲ. ನಿತೇಶ್ 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದಾರೆ. ನಾಪತ್ತೆಯಾದ ದಿನ ಕೆಂಪು ಬಣ್ಣದ ಟೀ ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ.
ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.