ಮಂಗಳೂರು, ಮೇ. 05 (DaijiworldNews/AA): ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಬಳಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಗ್ರೂಪ್ ನಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಪೋಸ್ಟ್ ಮಾಡಲಾಗಿರುತ್ತದೆ. ಈ ಹಿನ್ನೆಲೆ ಮಂಗಳೂರು ನಗರ ಪೊಲೀಸ್ ಘಟಕವು ಪ್ರಕರಣ ದಾಖಲಿಸಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಪೊಲೀಸರು, ಪುತ್ತೂರಿನ ಮನೀಷ್ ಎಂಬಾತ ವಾಟ್ಸಾಪ್ ಗ್ರೂಪ್ ನಲ್ಲಿ ಮಹೇಶ್ ಎಸ್ ಎಂಬ ಹೆಸರಿನಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಿದ್ದ. ಸದ್ಯ ಆತನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ.
ಮನೀಷ್ ಎಂಬಾತ ವಾಟ್ಸಾಪ್ ಗ್ರೂಪ್ ನಲ್ಲಿ "ನಮ್ಮ ಕಾರ್ಯಕರ್ತನಾದ ಸುಹಾಸ್ ಬಜ್ಪೆಯ ಹತ್ಯೆಯನ್ನು ಖಂಡಿಸಿ ಇಂದು ಬೆಳಗ್ಗೆ 6:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ದ. ಕ ಜಿಲ್ಲೆ ಸಂರ್ಪೂರ್ಣ ಬಂದ್. ಸುಹಾಸ್ ರವರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ನಮ್ಮ ಬಲವನ್ನು ಈಗ ತೋರಿಸದೇ ಇದ್ದಲ್ಲಿ ಮುಂದೊಂದು ದಿನ ನಾವೇ ಇರುವುದಿಲ್ಲ. ಹಿಂದೂ ಸಾಗರದ ಬಿಂದು ಬಿಂದುಗಳೇ ಒಟ್ಟಾಗೋಣ, ಬಲಿದಾನ ವ್ಯರ್ಥವಾಗದಿರಲಿ" ಎಂಬುದಾಗಿ ಪೋಸ್ಟ್ ಮಾಡಿದ್ದ.
ಸದ್ಯ ಈ ಪ್ರಚೋದನಕಾರಿ ಪೋಸ್ಟ್ ನ ಆಧಾರದಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ 192 ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ಮುಂದಿನ ತನಿಖೆಯ ಸಲುವಾಗಿ ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.