ಕಾಪು, ಮೇ. 12 (DaijiworldNews/AA): ವಿವಾಹ ಸಮಾರಂಭದ ವೇಳೆ ದೇವಾಲಯದ ಕೆರೆಯ ಬಳಿ ಆಕಸ್ಮಿಕವಾಗಿ ಬಾಲಕನೊಬ್ಬ ಮುಳುಗಿ ಮೃತಪಟ್ಟ ದಾರುಣ ಘಟನೆ ನಂದಿಕೂರಿನಲ್ಲಿ ಮೇ 11ರಂದು ಸಂಭವಿಸಿದೆ.

ಮೃತಪಟ್ಟ ಮಗುವನ್ನು ಕಾಪು, ಕುರ್ಕಾಲು ಗ್ರಾಮದ ನಿವಾಸಿಗಳಾದ ಸತ್ಯನಾರಾಯಣ (38) ಮತ್ತು ಸೌಮ್ಯ ಅವರ ಪುತ್ರ ವಾಸುದೇವ (4) ಎಂದು ಗುರುತಿಸಲಾಗಿದೆ.
ಸತ್ಯನಾರಾಯಣ ಅವರು ನೀಡಿದ ದೂರಿನ ಪ್ರಕಾರ, ಕುಟುಂಬವು ನಂದಿಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿವಾಹಕ್ಕೆ ಹಾಜರಾಗಿತ್ತು. ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಸೌಮ್ಯ ಅವರು ತಮ್ಮ ಕಿರಿಯ ಮಗು ವಿಷ್ಣು ಪ್ರಿಯಾ (1)ಗೆ ಸಭಾಂಗಣದ ಒಳಗೆ ಊಟ ಮಾಡಿಸುತ್ತಿದ್ದರು. ವಾಸುದೇವ ಕೂಡ ತಾಯಿಯ ಸಮೀಪವಿದ್ದನು.
ಮಗುವಿಗೆ ಊಟ ಮಾಡಿಸಿದ ನಂತರ, ಸೌಮ್ಯ ಅವರು ಕೈ ತೊಳೆಯಲು ಹೊರಗೆ ಹೋದರು ಎನ್ನಲಾಗಿದೆ. ಹಿಂತಿರುಗಿದಾಗ, ವಾಸುದೇವ ಕಾಣೆಯಾಗಿರುವುದು ಅವರ ಗಮನಕ್ಕೆ ಬಂದಿತು. ತಕ್ಷಣ ಅವರು ಸಭಾಂಗಣದಲ್ಲಿದ್ದ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ತಿಳಿಸಿ ಆವರಣದಲ್ಲಿ ಹುಡುಕಾಟ ನಡೆಸಿದ್ದಾರೆ. ಎಷ್ಟು ಹುಡುಕಿದರೂ, ಮಗು ಸಭಾಂಗಣದ ಒಳಗೆ ಪತ್ತೆಯಾಗಲಿಲ್ಲ.
ಸುಮಾರು 2:15 ರ ಸುಮಾರಿಗೆ, ವಾಸುದೇವನ ದೇಹವು ಸಮಾರಂಭದ ಸ್ಥಳದ ಪಕ್ಕದಲ್ಲಿದ್ದ ದೇವಾಲಯದ ಕೆರೆಯಲ್ಲಿ ತೇಲುತ್ತಿರುವುದು ಕಂಡುಬAದಿತು. ಅಲ್ಲಿದ್ದವರು ತಕ್ಷಣ ಮಗುವನ್ನು ಹೊರತೆಗೆದು ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಆದರೆ ಮಗು ಚಿಕಿತ್ಸೆಗೆ ಸ್ಪಂದಿಸಿರಲಿಲ್ಲಲ್ಲೀ ವಿಷಯವನ್ನು ಸೌಮ್ಯ ಅವರು ತಮ್ಮ ಪತಿಗೆ ತಿಳಿಸಿದ್ದು, ಮಗುವನ್ನು ತಕ್ಷಣ ಉಡುಪಿಯ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಮಗು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಬಳಿಕ ಕುಟುಂಬವು ಮಗುವನ್ನು ಮಣಿಪಾಲದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದಿತ್ತು. ಆದರೆ ಅಲ್ಲಿಯೂ ವೈದ್ಯರು ಮಗು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.
ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.