ಉಡುಪಿ, ಮೇ. 15(DaijiworldNews/TA): ಜಿಲ್ಲಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ಪ್ರಕರಣಗಳಾಗಿ ಸಾವು-ನೋವುಗಳು ಸಂಭವಿಸದಂತೆ ರಸ್ತೆಗಳಲ್ಲಿ ವಾಹನಗಳು ಸುಗಮ ಹಾಗೂ ಸುರಕ್ಷಿತವಾಗಿ ಸಂಚರಿಸಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕಾಮಗಾರಿಗಳು ಹಾಗೂ ರಸ್ತೆ ಸೂಚನಾ ಫಲಕ ಅಳವಡಿಸಿ, ರಸ್ತೆ ಅಪಘಾತ ಪ್ರಕರಣಗಳು ಕಡಿಮೆ ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.



ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರು ರಸ್ತೆಗಳಲ್ಲಿ ಸಂಚರಿಸುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಪ್ರಾಧಿಕಾರ ನಿಗಧಿಪಡಿಸಿರುವ ವೇಗ ಮಿತಿಯೊಳಗೆ ಸಂಚರಿಸಿದಲ್ಲಿ ವಾಹನಗಳು ಸುಗಮವಾಗಿ ಹಾಗೂ ಸುರಕ್ಷಿತವಾಗಿ ಸಂಚರಿಸಲು ಸಾಧ್ಯವಾಗುತ್ತದೆ. ಇದಕ್ಕೆ ಒತ್ತು ನೀಡಬೇಕು ಎಂದರು.
ಜಿಲ್ಲೆಯಲ್ಲಿ ಗುರುತಿಸಲಾಗಿರುವ ಬ್ಲಾಕ್ಸ್ಪಾಟ್ ಪ್ರದೇಶಗಳಲ್ಲಿ ವಾಹನಗಳ ಸುರಕ್ಷಿತ ಚಾಲನೆಗೆ ಅಗತ್ಯವಿರುವ ವೈಜ್ಞಾನಿಕವಾಗಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು, ಅವಶ್ಯವಿರುವ ಕಡೆಯಲ್ಲಿ ಹಂಪ್ಗಳ ಅಳವಡಿಕೆ, ಸೂಚನಾ ಫಲಕಗಳು ಸೇರಿದಂತೆ ಮತ್ತಿತರ ಸುರಕ್ಷತಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಅತೀ ವೇಗವಾಗಿ ಹಾಗೂ ಅಜಾಗರುಕತೆಯಿಂದ ವಾಹನ ಚಾಲನೆ ಮಾಡಿ ರಸ್ತೆ ಅಪಘಾತ ಮಾಡಿದ 82 ಜನ ಆರೋಪಿಗಳ ಚಾಲನ ಪರವಾನಿಗೆಯನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದ ಅವರು, ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರಿ ಬಸ್ಗಳನ್ನು ಅತೀ ಜೋರಾಗಿ ಚಾಲನೆ ಮಾಡುವುದರ ಜೊತೆಗೆ ಎಲ್ಲೆಂದರಲ್ಲಿ ಬಸ್ಗಳನ್ನು ನಿಲ್ಲಿಸುತ್ತಾರೆ. ಇದರಿಂದ ಅಪಘಾತ ಹಾಗೂ ಸುಗಮ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಉಡುಪಿ ನಗರವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲು ಸೂಚನೆಗಳು ಇದ್ದರು ಸಹ ನಿಯಮಗಳನ್ನು ಗಾಳಿಗೆ ತೂರಿ ಪಾರ್ಕಿಂಗ್ ಸ್ಥಳಗಳಲ್ಲಿ ವಾಣಿಜ್ಯ ಉದ್ಯಮಗಳಿಗೆ ಬಳಕೆ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಹಕರು, ವಾಣಿಜ್ಯ ಉದ್ಯಮಿಗಳು ತಮ್ಮ ವಾಹನಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡುವ ಹಿನ್ನೆಲೆ, ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಈ ಬಗ್ಗೆ ಈಗಾಗಲೇ ಕೆಲವು ಮಾಲೀಕರಿಗೆ ನೋಟೀಸ್ ನೀಡಿದ್ದರು ಸಹ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಅವರಿಗೆ ಅಂತಿಮ ನೋಟೀಸ್ ಅನ್ನು ನೀಡಿ ನಿಯಮಾನುಸಾರ ಕಾನೂನಿನ ಅಡಿ ಕ್ರಮ ಕೈಗೊಳ್ಳಬೇಕು ಎಂದು ನಗರಸಭಾ ಆಯುಕ್ತರಿಗೆ ಸೂಚನೆ ನೀಡಿದರು.
ಉಡುಪಿ ನಗರಸಭಾ ವ್ಯಾಪ್ತಿಯ ಐದು ಜಂಕ್ಷನ್ಗಳಲ್ಲಿ ಸಿಗ್ನಲ್ಲೈಟ್ಗಳು ಅಳವಡಿಸಲು ಕಳೆದ ಸಭೆಯಲ್ಲಿಯೇ ತೀರ್ಮಾನಿಸಲಾಗಿತ್ತು. ಆದರೂ ಅಳವಡಿಸಿರುವುದಿಲ್ಲ. ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ಅವರು, ಕಲ್ಸಂಕ ಹಾಗೂ ಅಂಬಲ್ಪಾಡಿ ಜಂಕ್ಷನ್ಗಳಲ್ಲಿ ಸಿಗ್ನಲ್ಲೈಟ್ ಕೂಡಲೇ ಅಳವಡಿಸುವಂತೆ ತಿಳಿಸಿದ ಅವರು, ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಕ್ರಿಯಾ ಯೋಜನೆಯಡಿ ರಸ್ತೆ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಆದರೆ ಕಾಮಗಾರಿಗಳ ಅನುಷ್ಠಾನ ಇವರೆಗೂ ಆಗಿರುವುದಿಲ್ಲ. ಈ ಬಗ್ಗೆ ಕ್ರಮ ವಹಿಸುವಂತೆ ತಿಳಿಸಿದರು.
ಆಟೋ ರಿಕ್ಷಾ ಚಾಲಕರು ಉಡುಪಿ ನಿಲ್ದಾಣ ವ್ಯಾಪ್ತಿಯಲ್ಲಿ ಬರುವ ಆಟೋ ನಿಲ್ದಾಣಗಳಲ್ಲಿ ನಿಲ್ಲಿಸಲು, ಆಟೋ ನಿಲ್ದಾಣದ ಸದಸ್ಯತ್ವ ಪಡೆಯಲು ಒಂದು ಲಕ್ಷ ದಿಂದ ನಲವತ್ತು ಸಾವಿರ ರೂ.ವರೆಗೆ ಪಾವತಿ ಮಾಡಬೇಕು ಎಂದು ಹೇಳಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಆಟೋ ನಿಲ್ದಾಣದ ಸ್ಥಳಗಳು ಸರಕಾರದ ಸ್ವತ್ತಾಗಿದ್ದು, ಪ್ರಸ್ತುತ ನಗರಸಭಾ ವ್ಯಾಪ್ತಿಯಲ್ಲಿದೆ. ಈ ರೀತಿ ಅನಗತ್ಯವಾಗಿ ಹಣ ವಸೂಲಾತಿಯನ್ನು ಯಾರೊಬ್ಬರೂ ಸಹ ಮಾಡುವ ಹಾಗಿಲ್ಲ. ಆಟೋ ನಿಲ್ದಾಣಗಳಲ್ಲಿ ಯಾವುದೇ ಆಟೋಗಳು ಸರತಿಯ ಆಧಾರದ ಮೇಲೆ ನಿಂತು ಪ್ರಯಾಣಿಸಲು ಅವಕಾಶ ಮಾಡಿ ಕೊಡಬೇಕು. ಈ ಬಗ್ಗೆ ನಗರಸಭಾ ಆಯುಕ್ತರು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ರಸ್ತೆ ಅಪಘಾತದ ಹಿಟ್ ಅಂಡ್ ರನ್ ಕೇಸ್ಗಳಲ್ಲಿ ಮೃತಪಟ್ಟ ಕುಟುಂಬದ ಅವಲಂಬಿತರಿಗೂ ಹಾಗೂ ಗಾಯಗೊಂಡವರಿಗೂ ಸೊಲೊಟಿಯಂ ಪರಿಹಾರ ಪಡೆಯಲು ಅರ್ಹರಿದ್ದು, ಎಲ್ಲಾ ಪ್ರಕಾರಣಗಳಲ್ಲಿಯೂ ಪರಿಹಾರವನ್ನು ಕೂಡಲೇ ನಿಯಮಾನುಸಾರ ಮಂಜೂರು ಮಾಡುವಂತೆ ತಾಲೂಕು ತಹಶೀಲ್ದಾರರುಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಎ.ಎಸ್.ಪಿ ಪರಮೇಶ್ವರ್ ಹೆಗಡೆ, ಡಿ. ಎಫ್. ಒ ಗಣಪತಿ, ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಗುತ್ತಿಗೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.