ಬಂಟ್ವಾಳ, ಜೂ. 15 (DaijiworldNews/TA) : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲೆವೆಡೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ತಾಲೂಕು ತಹಶೀಲ್ದಾರರು ಕಛೇರಿ ನೀಡಿದ ಮಾಹಿತಿಯಂತೆ ಅರಳ ಗ್ರಾಮದ ಪಂಬದಗದ್ದೆ ಎಂಬಲ್ಲಿನ ದಿನಕರ ಪಿ ಅವರ ಮನೆಯ ಮೇಲೆ ಮಣ್ಣು ಬಿದ್ದು ಮನೆಯ ಗೋಡೆಗೆ ಹಾನಿಯಾಗಿದೆ.





ಅವರನ್ನು ಪಕ್ಕದ ಮನೆ ಗೆ ಸ್ಥಳಾಂತರ ಗೊಳಿಸಲಾಗಿದೆ. ಕರಿಯಂಗಳ ಗ್ರಾಮದ ಪುಂಚಮಿ ಸರೋಜಿನಿ ಅವರ ದನದ ಹಟ್ಟಿಗೆ ಗುಡ್ಡ ಜರಿದು ಹಟ್ಟಿ ಸಂಪೂರ್ಣ ಜರಿದು ಬಿದ್ದಿದೆ. ಸುಮಾರು 10 ದನಗಳಿಗೆ ಸಣ್ಣ ಪುಟ್ಟ ಗಾಯವಾಗಿದೆ. ಕಾವಳಪಡೂರು ಗ್ರಾಮದ ಆಲಂಪುರಿ ಎಂಬಲ್ಲಿ ರೇವತಿ ರಮೇಶ್ ಗಾಣಿಗರವರ ಮನೆಯ ಮುಂಭಾಗದ ಬಾವಿ ಹಾಗೂ ಆವರಣ ಗೋಡೆ ಕುಸಿದ್ದಿದ್ದು ಸದ್ರಿ ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ವಿಟ್ಲದ ಐಟಿಐ ಕಾಲೇಜು ಅಪಾಯದ ಅಂಚಿನಲ್ಲಿದ್ದು, ಇಲ್ಲಿಗೆ ಹತ್ತಿರದ ಬರೆ ಕುಸಿದ ಕಾರಣ ಈ ಸಮಸ್ಯೆ ತಲೆದೋರಿದೆ.
ಅಮ್ಟಾಡಿ ಗ್ರಾಮದ ಬಾಂಬಿಲ ಎಂಬಲ್ಲಿ ಬಾಂಬಿಲ ಮತ್ತು ತಲೆಂಬಿಲ ಸಂಪರ್ಕಿಸುವ ಗ್ರಾಮ ಪಂಚಾಯತ್ ರಸ್ತೆಗೆ ಗುಡ್ಡ ಕುಸಿದಿರುತ್ತದೆ. ಕರಿಯಂಗಳ ಗ್ರಾಮದ ಶಾಂತ ಎಂಬವರ ಮನೆಯ ತಡೆಗೋಡ ಕುಸಿದಿರುತ್ತದೆ. ಕಾಡಬೆಟ್ಟು ಗ್ರಾಮದ ಮೇಗಿನಮನೆ ಎಂಬಲ್ಲಿನ ರಿಚಾರ್ಡ್ ಡಿ ಸೋಜ ರವರ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಸಮೀಪದ ಬಾಳ್ತಿಲ ಎಂಬಲ್ಲಿ ವಾಸ್ತವ್ಯ ಇಲ್ಲದ ಮನೆ ಹಾಗೂ ವಾಸ್ತವ್ಯ ದ ವಾಣಿಜ್ಯ ಸಂಕೀರ್ಣ ಗಳು ಜಲಾವೃತಗೊಂಡಿದೆ. ಈ ಕುರಿತಾಗಿ ಕಾಮಗಾರಿ ಗುತ್ತಿಗೆ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತಾದರೂ, ಕಂಪೆನಿಯವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಕಟ್ಟಡ ಸಹಿತ ಕೃಷಿ ತೋಟ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಈ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಕೆ.ಎನ್.ಆರ್.ಸಿ.ಕಂಪೆನಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಮಾಡಿದ ಅವಾಂತರವೇ ಕಟ್ಟಡಗಳು ಜಲಾವೃತಗೊಳ್ಳಲು ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿ ವಿಜಯ್ ಬೇಟಿ ನೀಡಿ ತಾತ್ಕಾಲಿಕ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದಾರೆ. ತಾಲೂಕಿನಾದ್ಯಣತ ಅನೇಕ ಕಡೆಗಳಲ್ಲಿ ಮರಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ದುರಸ್ತಿ ಕಾರ್ಯಕ್ಕೆ ಮೆಸ್ಕಾಂ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ವಿಟ್ಲ ಪರಿಸರದಲ್ಲೂ ವ್ಯಾಪಕ ಹಾನಿ ವಿಟ್ಲ-ಸಾಲೆತ್ತೂರು ರಸ್ತೆಯ ಕಾಡುಮಠ ಅಳ್ಳಿಗಂಡೆ ಎಂಬಲ್ಲಿನ ರಸ್ತೆ ತಿರುವಿನಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದು ವಿದ್ಯುತ್ ಕಂಬಗಳಿಗೆ ಹಾನಿಯಾಗಿ ವಾಹನ ಸಂಚಾರ ಬಂದ್ ಆಗಿದೆ.
ಕಾಡುಮಠ ಅಳ್ಳಿಗಂಡೆ ಎಂಬಲ್ಲಿನ ತೀರಾ ಅಪಾಯಕಾರಿ ರಸ್ತೆ ತಿರುವಿನಲ್ಲಿ ಶನಿವಾರ ತಡರಾತ್ರಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿಬಿದ್ದ ಪರಿಣಾಮ ವಿದ್ಯುತ್ ಸಂಚಾರಕ್ಕೆ ತಡೆಯುಂಟಾಗಿದೆ. ರಾತ್ರಿಯೇ ಅಗ್ನಿಶಾಮಕ, ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು, ವಿಟ್ಲ ಪೊಲೀಸರು ಆಗಮಿಸಿ ತಾತ್ಕಾಲಿಕ ಪರಿಹಾರ ಕೈಗೊಂಡಿದ್ದರು. ಭಾನುವಾರ ಬೆಳಗ್ಗಿನಿಂದ ಸಂಜೆಯವರೆಗೂ ವಿಟ್ಲ ಕಂದಾಯ ನಿರೀಕ್ಷಕರು, ಕೊಳ್ನಾಡು ಗ್ರಾಮ ಆಡಳಿತಾಧಿಕಾರಿ ಹಾಗೂ ಸಾಲೆತ್ತೂರು ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳು ಮಳೆ-ಗಾಳಿ ಲೆಕ್ಕಿಸದೇ ತೆರವು ಕಾರ್ಯಾಚರಣೆ ನಡೆಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ. ಅಧಿಕಾರಿಗಳ ಜೊತೆ ಸ್ಥಳೀಯರೂ ಕೈಜೋಡಿಸಿದ್ದಾರೆ.