ಪುತ್ತೂರು,ಜೂ. 22 (DaijiworldNews/TA): ವಿದ್ಯಾರ್ಥಿಗಳ ಹಾಜರಾತಿ ದೃಢೀಕರಣಕ್ಕೆ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕೆಲವು ಶಾಲೆ-ಕಾಲೇಜುಗಳು ಅಳವಡಿಸಿಕೊಂಡಿವೆ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮನೆಯಿಂದ ಹೊರಟ ವಿದ್ಯಾರ್ಥಿ ಶಾಲೆಗೆ ತಲುಪಿದ್ದಾನೆಯೇ? ಶಾಲೆಯಿಂದ ಹೊರಟಿದ್ದಾನೆಯೇ ಎನ್ನುವುದನ್ನು ಮನೆಯವರಿಗೂ ತಿಳಿಸುವ ಹೊಸ ಪರಿಕರವೊಂದನ್ನು ಸಂಶೋಧಿಸಿ ಶಾಲೆಯಲ್ಲಿ ಅಳವಡಿಸಿದ್ದಾನೆ.

ಪುತ್ತೂರಿನ ಬೊಳುವಾರು ನಿವಾಸಿ ವಿನೋದ್ ಕುಮಾರ್, ರಾಜೇಶ್ವರಿ ದಂಪತಿ ಪುತ್ರ, ಕೊಂಬೆಟ್ಟು ಪಿಯು ಕಾಲೇಜಿನ 2ನೇ ವರ್ಷದ ವಾಣಿಜ್ಯ ವಿದ್ಯಾರ್ಥಿ ಅರುಣ್ ಕುಮಾರ್ ಈ ಸಿಸ್ಟಮ್ನ ಸಂಶೋಧಕ. ಈ ಸಿಸ್ಟಮ್ನಲ್ಲಿ ಮುಖ, ಬೆರಳಚ್ಚು ಎರಡೂ ದಾಖಲಾಗುತ್ತದೆ. ಬೆಳಗ್ಗೆ 9ರಿಂದ 10 ಗಂಟೆಯ ಒಳಗೆ ವಿದ್ಯಾರ್ಥಿ ಶಾಲೆಗೆ ಬರಬೇಕು ಎನ್ನುವ ಸಮಯ ನಿಗದಿ ಮಾಡಲಾಗಿದೆ.
ಈ ಅವಧಿಯಲ್ಲಿ ಬರುವ ವಿದ್ಯಾರ್ಥಿಗಳು ಬಯೋಮೆಟ್ರಿಕ್ ಮುಂದೆ ನಿಂತರೆ ಹಾಜರಾತಿ ದಾಖಲಾಗುತ್ತದೆ ಮತ್ತು ವಿದ್ಯಾರ್ಥಿ ಶಾಲೆಗೆ ಬಂದಿದ್ದಾನೆ ಎನ್ನುವ ಸಂದೇಶ ವಾಟ್ಸ್ ಆ್ಯಪ್, ಟೆಲಿಗ್ರಾಮ್ ಮೂಲಕ ಹೆತ್ತವರಿಗೆ ರವಾನೆ ಆಗುತ್ತದೆ. ಸೂಚಿತ ಸಮಯದಲ್ಲಿ ಬಾರದೇ ಇದ್ದಲ್ಲಿ ಆ ವಿದ್ಯಾರ್ಥಿ ಗೈರಾಗಿದ್ದಾನೆ ಎನ್ನುವ ಸಂದೇಶವೂ ಹೆತ್ತವರಿಗೆ ಹೋಗುತ್ತದೆ. ಸಂಜೆ 3.30 ರಿಂದ 4.30ರ ಒಳಗೆ ಹೊರಟರೆ ಆ ಸಂದೇಶವೂ ಸಹ ಇದರಲ್ಲಿ ರವಾನೆಯಾಗುತ್ತದೆ. ಜಿಲ್ಲೆಯ ಮಟ್ಟಿಗೆ ಇದು ಮೊದಲ ಪ್ರಯೋಗ ಎನಿಸಿದೆ.