ಉಡುಪಿ, ಜೂ. 23 (DaijiworldNews/AA): ಅನುಚಿತ ವ್ಯಾಪಾರ ಪದ್ಧತಿ, ಸೇವಾ ನ್ಯೂನತೆ ಸಾಬೀತಾದ ಹಿನ್ನೆಲೆ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶೂರೆನ್ಸ್ ಕಂಪನಿಗೆ ಶೇ 10ರಷ್ಟು ವಾರ್ಷಿಕ ಬಡ್ಡಿಯೊಂದಿಗೆ 40,178 ರೂ. ದೂರುದಾರರಿಗೆ ಪರಿಹಾರ ನೀಡುವಂತೆ ಉಡುಪಿ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

ಉಡುಪಿಯ ತೆಂಕನಿಡಿಯೂರು ಗ್ರಾಮದ ಬೈಲಕೆರೆ ನಿವಾಸಿ ವಿಕ್ರಮ್ ಅವರು ಸ್ಟಾರ್ ಹೆಲ್ತ್ ವಿಮಾ ಕಂಪನಿಯಿಂದ ಕೆಲವು ವರ್ಷಗಳ ಹಿಂದೆ ಆರೋಗ್ಯ ವಿಮಾ ಪಾಲಿಸಿಯನ್ನು ಹೊಂದಿದ್ದರು. ಯಾವುದೇ ಲೋಪವಿಲ್ಲದೆ ಅವರು ನಿಯಮಿತವಾಗಿ ಪಾಲಿಸಿಯನ್ನು ನವೀಕರಿಸುತ್ತಿದ್ದರು. ಈ ನಡುವೆ ಅವರು 2024ರ ಮೇ 22 ರಂದು, ಅವರಿಗೆ ಇದ್ದಕ್ಕಿದ್ದಂತೆ ಎಡ ತೊಡೆಸಂದಿಯಲ್ಲಿ ಊತ ಕಾಣಿಸಿಕೊಂಡಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.
ಆದರೆ ವಿಮಾ ಕಂಪನಿಯು ಚಿಕಿತ್ಸೆಯ ಒಟ್ಟು ವೆಚ್ಚದಲ್ಲಿ ಕೇವಲ 41,170 ರೂ. ಮಾತ್ರ ಮರುಪಾವತಿಸಿತ್ತು. ಉಳಿದ 30,178ರೂ. ಪಾವತಿಸಲು ನಿರಾಕರಿಸಿತ್ತು. ವಿಕ್ರಮ್ ಅವರಿಗೆ ಯಾವುದೇ ಪೂರ್ವ ಕಾಯಿಲೆ ಇಲ್ಲದಿದ್ದರೂ ವಿಮಾ ಕಂಪನಿಯು ಇದೊಂದು ಪೂರ್ವ ಕಾಯಿಲೆ ಎಂದು ಕಾರಣ ನೀಡಿ ಬಾಕಿ ಮೊತ್ತ ಪಾವತಿಸಲಿಲ್ಲ.
ಈ ಹಿನ್ನೆಲೆ ನೊಂದ ಗ್ರಾಹಕರು ನ್ಯಾಯಕ್ಕಾಗಿ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ನ್ಯಾಯಾಲಯದ ಮೆಟ್ಟಿಲೇರಿದರು. ದೂರುದಾರರು ಸಲ್ಲಿಸಿದ ಅರ್ಜಿಯ ಮೇರೆಗೆ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಾಲಯವು ಪೂರ್ವ ಕಾಯಿಲೆಯನ್ನು ಸಾಬೀತು ಪಡಿಸಲು ವಿಮಾ ಕಂಪನಿಯುವಿಫಲವಾಗಿದೆ ಎಂದು ತೀರ್ಪು ನೀಡಿತು.
ದೂರುದಾರರಿಗೆ ವಿಮಾ ಕಂಪನಿ ನೀಡಲು ಬಾಕಿ ಇರುವ ಕ್ಲೇಮು ಮೊತ್ತ 30,178 ರೂ. ಅನ್ನು ಕಲೇಮು ನಿರಾಕರಿಸಿದ ಮೇ. 25ರಿಂದ ಶೇ. 10 ವಾಷಿಕ ಬಡ್ಡಿಯಂತೆ ಸಂಪೂರ್ಣ ಹಣ ಪಾವತಿಯಾಗುವವರೆಗೂ ನೀಡಬೇಕು. ಇದರ ಜೊತೆಗೆ ದೂರುದಾರರಿಗೆ ಆದ ಮಾನಸಿಕ ಹಿಂಸೆಗೆ ಮತ್ತು ವ್ಯಾಜ್ಯ ಖರ್ಚು 10,000 ರೂ.ಗಳನ್ನು ಆದೇಶದ ಪತ್ರಿ ತಲುಪಿದ 30 ದಿನದೊಳಗೆ ಪಾಲಿಸಬೇಕು ಎಂದು ಅಧ್ಯಕ್ಷ ಸುನೀಲ ತಿಮಾಸರೆಡ್ಡಿ ಹಾಗೂ ಸದಸ್ಯೆ ಸುಜಾತಾ ಬಿ.ಕೋರಳ್ಳಿ ಅವರನ್ನು ಒಳಗೊಂಡ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯ ಪೀಠ ಆದೇಶಿಸಿದೆ.
ದೂರುದಾರರ ಪರವಾಗಿ ನ್ಯಾಯವಾದಿ ವಿವೇಕಾನಂದ ಮಲ್ಯ ಕಾರ್ಕಳ ಅವರು ವಾದ ಮಂಡಿಸಿದ್ದರು.