ಕಾರ್ಕಳ, ಜೂ. 23 (DaijiworldNews/AA): "ರಾಜ್ಯದಲ್ಲಿ ಪ್ರತಿದಿನ ಸಮಸ್ಸೆಗಳು ಉಲ್ಬಣವಾಗುತ್ತಿದ್ದು, ಜನಹಿತವನ್ನು ಕಡೆಗಣಿಸಿ ಅಭಿವೃದ್ಧಿ ಚಟುವಟಿಕೆಗಳು ಮರೀಚಿಕೆಯಾಗಿದೆ. ಕಾಂಗ್ರೆಸ್ ಸರಕಾರದ ವಿರುದ್ಧ ವಿಧಾನಸಭಾದ ಒಳಗೆ ಮಾತ್ರವಲ್ಲ ಗ್ರಾಮ ಗ್ರಾಮಗಳಲ್ಲಿ ಹೋರಾಟ ನಡೆಸುವ ಅನಿವಾರ್ಯ ಎದುರಾಗಿದೆ" ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.


ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ದಕ್ಷಿಣ ಕನ್ನಡ - ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ಗಳ ಮುಂದೆ ಧರಣಿ ಸತ್ಯಾಗ್ರಹವನ್ನು ಬಿಜೆಪಿ ಆಯೋಜಿಸಿದ್ದು, ಅದರ ಅಂಗವಾಗಿ ಕಾರ್ಕಳ ವಿಸ್ತೃತ ಬಸ್ ನಿಲ್ದಾಣ ಮುಂಭಾಗದಲ್ಲಿ ಆಯೋಜಿಸಿದ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಅವರು ಮಾತನಾಡಿಸಿದರು.
"ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆಯಿಂದಾಗಿ ನಿರ್ಮಾಣವಾಗಿರುವ 9/11 ಸಮಸ್ಯೆಗೆ ಶ್ವಾಶತ ಪರಿಹಾರ ಆಗಬೇಕು. ಗ್ರಾಮ ಪಂಚಾಯತ್ಗಳಲ್ಲಿ ಸಾವಿರಾರು ಅರ್ಜಿಗಳು ಧೂಳು ಹಿಡಿಯುತ್ತಲಿದ್ದು, ಜನಸಾಮಾನ್ಯರಿಗೆ ವಾಸ್ತವ್ಯದ ಮನೆ ನಿರ್ಮಿಸಲು ವಿನ್ಯಾಸದ ನಕ್ಷೆಗೆ ಪ್ರಾಧಿಕಾರಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಪ್ರತಿ ಗ್ರಾಮ ಪಂಚಾತಿಗಳಿಗೆ ಕನಿಷ್ಠ ೧೦೦ ಮನೆಗಳನ್ನು ಕೊಟ್ಟಿದ್ದು, ಈಗ ಕಾಂಗ್ರೆಸ್ ಸರ್ಕಾರದ 2 ವರ್ಷ ಅವಧಿಯಲ್ಲಿ ಒಂದೇ ಒಂದು ಆಶ್ರಯ ಮನೆಯನ್ನು ಈ ವರೆಗೆ ಕೊಟ್ಟಿಲ್ಲ ಎಂದು ಆರೋಪಿಸಿದರು.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರರ್ಕಾರವು ಅನುಷ್ಠಾನಕ್ಕೆ ತಂದಿದ್ದ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಯನ್ನು ರದ್ದುಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈಗಾಗಲೇ ಸುಮಾರು 23 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಅನರ್ಹಗೊಳಿಸಲು ಸುತ್ತೊಲೆ ಹೊರಡಿಸಿದೆ ಎಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಶಾಸಕ ವಿ.ಸುನೀಲ್ ಕುಮಾರ್ ಬಹಿರಂಗ ಪಡಿಸಿದರು.
ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಕಾರ್ಕಳ ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಮಣಿರಾಜ್ ಶೆಟ್ಟಿ, ಕಾರ್ಕಳ ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್, ಕಾರ್ಕಳ ಪುರಸಭಾ ಮಾಜಿ ಉಪಾಧ್ಯಕ್ಷ ಗಿರಿಧರ್ ನಾಯಕ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ, ಉದ್ಯಮಿ ನಿತ್ಯಾನಂದ ಪೈ ಮೊದಲಾದವರು ಸಂದಭೋಚಿತವಾಗಿ ಮಾತನಾಡಿ ರಾಜ್ಯ ಸರಕಾರದ ನಿಲುವನ್ನು ಖಂಡಿಸಿದರು.
9/11 ನಮೂನೆ ಸಮಸ್ಯೆ, ಆಶ್ರಯ ಮನೆ, ಅಕ್ರಮ-ಸಕ್ರಮ ಅರ್ಜಿ ತಿರಸ್ಕಾರ, ವೃದ್ಧಾಪ್ಯ ವೇತನ ಯೋಜನೆ,ಸಂಧ್ಯಾ ಸುರಕ್ಷಾ ಯೋಜನೆ, ನಿರಂತರವಾಗಿ ಏರಿಸಲಾಗುತ್ತಿರುವ ವಿದ್ಯುತ್ ಬೆಲೆಯನ್ನು ಇಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.