ಮಂಗಳೂರು, ಜೂ. 23 (DaijiworldNews/AA): ರಾಜ್ಯದ ಪ್ರಗತಿಗೆ ಅದರಲ್ಲಿಯೂ ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವುದಕ್ಕೆ ಜನಾಂದೋಲವನ್ನು ರೂಪಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.




ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಕ್ಷವು ಗುರುಪುರ ಗ್ರಾಮ ಪಂಚಾಯತ್ ಕಚೇರಿ ಮುಂದೆ ಇಂದು ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅನಾಚಾರ, ದುರಾಡಳಿತ, ಜನವಿರೋಧಿ ನೀತಿಗಳಿಂದಾಗಿ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಹೇರಬೇಕಾದ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಈ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಜನರೇ ಬೀದಿಗಿಳಿಯುವ ಕಾಲ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಡಳಿತ ವಿಕೇಂದ್ರೀಕರಣ ಡಾ. ಅಂಬೇಡ್ಕರ್ ಅವರ ಕನಸು; ಅದು ಸಂವಿಧಾನದ ಆಶಯ ಕೂಡಾ ಹೌದು. ಆದರೆ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆಯಿಂದ ಹಿಡಿದು ಪಾಲಿಕೆವರೆಗೆ ಎಲ್ಲಾ ಕಡೆ ಸ್ಥಳೀಯಾಡಳಿತ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗಿದೆ. ಗ್ರಾಮ ಪಂಚಾಯತ್ಗಳು ನೀಡುತ್ತಿದ್ದ ಏಕ ವಿನ್ಯಾಸ ನಕ್ಷೆಯಾದ 9/11 ವಿತರಣೆಯ ಹಕ್ಕನ್ನು ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರವನ್ನು ಮೊಟಕುಗೊಳಿಸಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ. ಸಿಂಗಲ್ ಸೈಟ್ನಲ್ಲಿ ಮನೆ ಕಟ್ಟಲು ಸಾಧ್ಯವಾಗದೇ ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ. ಸರಳವಾಗಿದ್ದ ಈ ನಿಯಮ ಜಟಿಲಗೊಳಿಸಿರುವ ಕಾಂಗ್ರೆಸ್ ಸರ್ಕಾರ ಈ ಮೂಲಕವೂ ಮಧ್ಯವರ್ತಿಗಳ ದಂಧೆ ಮಾಡಲು ಅವಕಾಶ ಕೊಟ್ಟಿದೆ. ಚುನಾವಣೆ ವೇಳೆ ಗ್ಯಾರಂಟಿ, ಉಚಿತ ಯೋಜನೆಗಳ ಘೋಷಣೆ ಮಾಡಿ ಜನರನ್ನು ಮೋಸದ ಬಲೆಗೆ ಬೀಳಿಸಿ ಇದೀಗ ವಾಮಮಾರ್ಗಗಳ ಮೂಲಕ ಜನರು ಬೆವರು ಸುರಿಸಿ ದುಡಿದ ಹಣವನ್ನೇ ಕಸಿದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಒಂದೊಂದು ಪಂಚಾಯತ್ ಮೂಲಕ ಅನೇಕ ಮನೆಗಳನ್ನು ಬಡವರ್ಗದವರಿಗೆ ಕೊಡಲಾಗಿತ್ತು. ಆದರೆ, ಈ ಬಡವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಒಂದೇ ಒಂದು ಮನೆಯನ್ನು ಹಸ್ತಾಂತರಿಸಲು ಸಾಧ್ಯವಾಗಿಲ್ಲ. ಇನ್ನು ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸಿದ್ದರಾಮಯ್ಯ ಸರ್ಕಾರ ಆದೇಶಿಸಿದೆ. ಹೀಗಿರುವಾಗ, ರಾಜ್ಯದಲ್ಲಿ ಅಭಿವೃದ್ಧಿಯೂ ಇಲ್ಲ, ಅತ್ತ ಗ್ಯಾರಂಟಿಗಳನ್ನು ನಂಬಿದ್ದ ಬಡವರ ಗೋಳು ಕೇಳುವವರಿಲ್ಲ. ಫಲಾನುಭವಿಗಳಿಗೆ ಪಿಂಚಣಿಯೂ ಇಲ್ಲದೆ ಹಿರಿಯ ನಾಗರಿಕರ ಬದುಕನ್ನು ತೀರಾ ಕೆಟ್ಟ ಪರಿಸ್ಥಿತಿಗೆ ತಳ್ಳಿದೆ. ಮತ್ತೊಂದೆಡೆ, ಭ್ರಷ್ಟಾಚಾರದ ಮೂಲಕ ಈ ಕಾಂಗ್ರೆಸ್ ಸರ್ಕಾರವು ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದು, ಪ್ರತಿಯೊಂದು ಇಲಾಖೆಯಲ್ಲಿಯೂ ಬರೀ ವಸೂಲಿ-ಸುಲಿಗೆಕೋರರೇ ದರ್ಬಾರು ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆಯು ಯಾವ ಮಟ್ಟಕ್ಕೆ ಕುಸಿದಿದೆ ಎನ್ನುವುದಕ್ಕೆ ನಮ್ಮ ಜಿಲ್ಲೆಯಲ್ಲಿ ನಡುರಸ್ತೆಯಲ್ಲೇ ಹಿಂದೂ ಕಾರ್ಯಕರ್ತನ ಕೊಲೆಯೇ ಜ್ವಲಂತ ಸಾಕ್ಷಿ. ಒಟ್ಟಾರೆ ದುರಾಡಳಿತದ ಈ ಸರ್ಕಾರ ರಾಜ್ಯದ ಆರ್ಥಿಕ ಸ್ಥಿತಿಯನ್ನು ಅದೋಗತಿ ದೂಡಿದೆ ಎಂದು ಕ್ಯಾ. ಚೌಟ ಆರೋಪಿಸಿದ್ದಾರೆ.
ಪ್ರತಿಭಟನಾ ಸಭೆ ಬಳಿಕ ಸಂಸದ ಕ್ಯಾ. ಚೌಟ ಹಾಗೂ ಬಿಜೆಪಿಯ ಗುರುಪುರ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕರ ವಿ. ಶೆಟ್ಟಿ ನೇತೃತ್ವದ ಬಿಜೆಪಿ ನಿಯೋಗವು ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಪಂಕಜಾ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದೆ.