ಉಡುಪಿ, ಜೂ. 24 (DaijiworldNews/AA): ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ನೇತೃತ್ವದ ನಿಯೋಗವು ಇಂದು ಉಡುಪಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರಿರಾಮ್ ಶಂಕರ್ ಅವರನ್ನು ಭೇಟಿ ಮಾಡಿ, ಪುಷ್ಪಗುಚ್ಛ ನೀಡಿ ಸನ್ಮಾನಿಸಿತು.

ಸಭೆಯ ಸಂದರ್ಭದಲ್ಲಿ, ವಕೀಲರ ಸಂಘವು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ನಗರದಲ್ಲಿ ಸಂಚಾರ ನಿರ್ವಹಣೆಯನ್ನು ಸುಧಾರಿಸಲು ವಿಶೇಷ ಗಮನ ನೀಡುವಂತೆ ಎಸ್ಪಿಗೆ ಮನವಿ ಮಾಡಿತು. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಸ್ಥಳಾವಕಾಶದ ಕೊರತೆಯ ಬಗ್ಗೆಯೂ ಅವರ ಗಮನಕ್ಕೆ ತಂದ ಸಂಘವು, ಪ್ರಸ್ತುತ ಅದೇ ಆವರಣದ ಮೇಲಿನ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಠಾಣೆಯನ್ನು ಹೆಚ್ಚು ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿತು.
ವಕೀಲರ ಸಂಘಕ್ಕೆ ಭೇಟಿ ನೀಡಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಎಸ್ಪಿಗೆ ಆಹ್ವಾನ ನೀಡಿತು. ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಎಸ್ಪಿ ಹರಿರಾಮ್ ಶಂಕರ್, ಮುಂದಿನ ದಿನಗಳಲ್ಲಿ ಸಂಘಕ್ಕೆ ಭೇಟಿ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ವಕೀಲರ ಸಂಘದ ಪದಾಧಿಕಾರಿಗಳಾದ ರಾಜೇಶ್ ಎ.ಆರ್., ಬೈಲೂರು ರವೀಂದ್ರ ದೇವಾಡಿಗ, ಸಂತೋಷ್ ಮೂಡುಬೆಳ್ಳೆ, ಜಯಕೃಷ್ಣ ಆಳ್ವ ಮತ್ತು ಆರೂರು ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು.