ಮಂಗಳೂರು,ಜೂ. 26 (DaijiworldNews/AK): ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಮತ್ತೊಂದು ಮಾರಾಮಾರಿ ನಡೆದಿದೆ. ಗುರುವಾರ (ಜೂನ್ 26) ಜೈಲು ಆವರಣದಲ್ಲಿ ಕೈದಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.

ಈ ಘರ್ಷಣೆಯಲ್ಲಿ ಉಳ್ಳಾಲದ ಕುಖ್ಯಾತ ರೌಡಿ ಮುಖ್ತಾರ್ ಮತ್ತು ಇತರ ಕೈದಿಗಳು ಭಾಗಿಯಾಗಿದ್ದರು. ಮುಖ್ತಾರ್ ಕೇಶವ್ ಎಂಬ ಮತ್ತೊಬ್ಬ ಕೈದಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಗಂಭೀರ ಗಾಯಗೊಂಡ ಕೇಶವ್ ಅವರನ್ನು ಪೊಲೀಸರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನವೆಂಬರ್ 6, 2023 ರಂದು ನಡೆದ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದಲ್ಲಿ ಕೇಶವ್ ಆರೋಪಿಯಾಗಿದ್ದು, ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಉಳ್ಳಾಲದ ಧರ್ಮನಗರ ನಿವಾಸಿ ಮೊಹಮ್ಮದ್ ಮುಖ್ತಾರ್ 15 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಬಂಧನದ ಸಮಯದಲ್ಲಿ ಕಾಲಿಗೆ ಗುಂಡು ಹಾರಿಸಿದ ನಂತರ ಜುಲೈ 2022 ರಲ್ಲಿ ಬಂಧಿಸಲಾಯಿತು.
ಇತ್ತೀಚಿನ ಜೈಲು ಜಗಳದ ನಂತರ, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬರ್ಕೆ ಠಾಣೆಯ ಅಧಿಕಾರಿಗಳು ಮತ್ತು ಎಸಿಪಿ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕೈದಿಗಳ ನಡುವೆ ಪದೇ ಪದೇ ಘರ್ಷಣೆಗಳು ನಡೆಯುತ್ತಿರುವುದು ಜೈಲಿನ ಭದ್ರತೆ ಮತ್ತು ನಿರ್ವಹಣೆಯ ಬಗ್ಗೆಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.