ಕಾಸರಗೋಡು, ಜು. 17(DaijiworldNews/TA): ಮನೆಯ ಪಾರ್ಶ್ವದ ಗುಡ್ಡ ಕುಸಿದು ಮನೆ ಭಾಗಶಃ ಹಾನಿಗೊಂಡ ಘಟನೆ ಚಂದ್ರಗಿರಿ ಸಮೀಪ ಸಂಭವಿಸಿದೆ.




ಚಂದ್ರಗಿರಿ ನಡಕ್ಕಾಲ್ ನ ಮಿತೇಶ್ ಎಂಬವರ ಮನೆ ಸಮೀಪದ ಗುಡ್ಡ ನಿನ್ನೆ ರಾತ್ರಿಯ ಭೀಕರ ಮಳೆಗೆ ಕುಸಿದಿದ್ದು ಬೃಹತ್ ಕಲ್ಲು ಸಹಿತ ಮಣ್ಣು ಮನೆಯ ಒಂದು ಪಾರ್ಶ್ವದ ಮೇಲೆ ಕುಸಿದು ಅವಘಡಕ್ಕೆ ಕಾರಣವಾಯಿತು. ಅವಘಡದಿಂದ ಮನೆಯ ಒಂದು ಕೊಠಡಿ ಸಂಪೂರ್ಣ ಹಾನಿಗೊಳಗಾಗಿದ್ದು, ಮನೆ ಭಾಗಶಃ ಹಾನಿಗೊಂಡಿದೆ.
ಮನೆಯಲ್ಲಿ ನಾಲ್ವರು ವಾಸಿಸುತ್ತಿದ್ದು, ಕುಸಿತದ ಸದ್ದು ಕೇಳಿ ಮನೆಯಲ್ಲಿದ್ದವರು ಹೊರಗೆ ಓಡಿ ಹಾನಿಯಿಂದ ಬಚಾವಾದರು. ಮನೆಯ ಸಮೀಪದ ಗುಡ್ಡ ಕುಸಿಯುವ ಬಗ್ಗೆ ಈ ಹಿಂದೆಯೇ ಸಂಶಯಗಳಿದ್ದು, ಎರಡು ವರ್ಷಗಳ ಹಿಂದೆಯೇ ಕಂದಾಯ ಇಲಾಖೆಯ ಅಧಿಕೃತರಿಗೆ ಮನವಿ ನೀಡಿ ವಿಷಯದ ಗಂಭೀರತೆಯನ್ನು ತಿಳಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲವೆಂದು ಮಿತೇಶ್ ಅವಲತ್ತುಕೊಂಡಿದ್ದಾರೆ.