ಉಡುಪಿ, ಜು. 23 (DaijiworldNews/AA): ಚಾಲಕರ ಕೊರತೆಯಿಂದ ಶಿರ್ವದ 108 ಮತ್ತು ಸಮುದಾಯ ಆರೋಗ್ಯ ಕೇಂದ್ರದ ಆ್ಯಂಬ್ಯುಲೆನ್ಸ್ಗಳ ಸೇವೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಶಿರ್ವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬ್ಯುಲೆನ್ಸ್ ಸೇವೆ ಒದಗಿಸುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಅವರು ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಅವರಿಗೆ ಮನವಿ ಸಲ್ಲಿಸಿದರು.


ಪ್ರಸ್ತುತ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದು 108 ಆ್ಯಂಬ್ಯುಲೆನ್ಸ್ ಮತ್ತು ಇನ್ನೊಂದು ಆಸ್ಪತ್ರೆ ಆ್ಯಂಬ್ಯುಲೆನ್ಸ್ ಸೇರಿದಂತೆ ಎರಡು ಆ್ಯಂಬ್ಯುಲೆನ್ಸ್ಗಳಿವೆ. ಆದರೆ, ಈ ಎರಡು ಆ್ಯಂಬುಲೆನ್ಸ್ಗಳಿಗೆ ಚಾಲಕರ ಕೊರತೆಯಿದೆ. ಆಸ್ಪತ್ರೆಯ ಆ್ಯಂಬ್ಯುಲೆನ್ಸ್ ವಾರದಲ್ಲಿ ಮೂರು ದಿನ ಮಾತ್ರ ಕೆಲಸದ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ 108 ಆ್ಯಂಬ್ಯುಲೆನ್ಸ್ ಚಾಲಕರಿಲ್ಲದೆ ನಿಷ್ಕ್ರಿಯಗೊಂಡಿದ್ದು, ಕಾರ್ಕಳಕ್ಕೆ ವರ್ಗಾಯಿಸಲಾಗಿದೆ. ಇದರ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಅದನ್ನು ದುರಸ್ತಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.
ಶಿರ್ವದಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಕಾರಣ, 108 ಆ್ಯಂಬ್ಯುಲೆನ್ಸ್ಗಳ ಲಭ್ಯತೆ ನಿರ್ಣಾಯಕವಾಗಿದೆ ಎಂದು ಪವನ್ ಕುಮಾರ್ ತಿಳಿಸಿದ್ದಾರೆ. ತುರ್ತು ಪರಿಸ್ಥಿತಿಗಳಲ್ಲಿ, ಸರ್ಕಾರಿ ಆ್ಯಂಬ್ಯುಲೆನ್ಸ್ ಸೇವೆಗಳು ಲಭ್ಯವಿಲ್ಲದ ಕಾರಣ ರೋಗಿಗಳು ಹೆಚ್ಚಿನ ವೆಚ್ಚದಲ್ಲಿ ಖಾಸಗಿ ಆಂಬ್ಯುಲೆನ್ಸ್ಗಳನ್ನು ಬಳಸುವಂತಾಗಿದೆ.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ ಅವರು, ಒಂದು ವಾರದೊಳಗೆ ಸಮಸ್ಯೆಯನ್ನು ಪರಿಹರಿಸಲಾಗುವುದು ಮತ್ತು ಶಿರ್ವಗೆ 108 ಆ್ಯಂಬ್ಯುಲೆನ್ಸ್ ಸೇವೆ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.