ಕಾಸರಗೋಡು, ಆ. 07 (DaijiworldNews/AA): ನಿರ್ಮಾಣ ಹಂತದ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಕಟ್ಟಡ ಮಾಲೀಕ ಮೃತಪಟ್ಟ ಘಟನೆ ಮಾವುಂಗಾಲ್ ನಲ್ಲಿ ನಡೆದಿದೆ.

ಗುತ್ತಿಗೆದಾರನು ಇವರನ್ನು ಕೆಳಗೆ ದೂಡಿ ಹಾಕಿದ್ದಾಗಿ ಆರೋಪಿಸಲಾಗಿದೆ. ವೆಳ್ಳಿಕೋತ್ ಪೇರಲದ ರಾಯ್ ಜೋಸೆಫ್ (48) ಮೃತಪಟ್ಟವರು.
ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯ್ ಜೋಸೆಫ್ ಅವರು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಅವರು ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಉದ್ಯಮ ನಡೆಸುತ್ತಿದ್ದರು. ಆಗಸ್ಟ್ 3ರಂದು ಮಧ್ಯಾಹ್ನ ಈ ಘಟನೆ ನಡೆದಿತ್ತು. ಮಾವುಂಗಾಲ್ ಮೂಲಕಂಡ ಎಂಬಲ್ಲಿ ಘಟನೆ ನಡೆದಿದೆ.
ರಾಯ್ ಜೋಸೆಫ್ ಮತ್ತು ಗುತ್ತಿಗೆದಾರನ ನಡುವೆ ಕೆಲಸದ ಬಗ್ಗೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾತು ವಿಕೋಪಕ್ಕೆ ತಿರುಗಿ ರಾಯ್ ಜೋಸೆಫ್ ರನ್ನು ಗುತ್ತಿಗೆದಾರ ಮೂರನೇ ಮಹಡಿಯಿಂದ ತಳ್ಳಿ ಹಾಕಿರುವುದಾಗಿ ದೂರಲಾಗಿದೆ. ಗಂಭೀರ ಗಾಯಗೊಂಡ ರಾಯ್ ರವರು ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಗುತ್ತಿಗೆದಾರ ದೂಡಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಕಣ್ಣೂರಿನ ಅಳಕೋಡ್ನ ಪರಪ್ಪ ಮೂಲದ ರಾಯ್, ಕಾಞಂಗಾಡ್ನ ವಾಸಿಸುತ್ತಿದ್ದು ಆರ್ಜೆ ಅಲ್ಯೂಮಿನಿಯಂ ಮೆಟೀರಿಯಲ್ಸ್ ನಡೆಸುತ್ತಿದ್ದರು. ಘಟನೆ ನಡೆದ ಸ್ಥಳದಲ್ಲಿ ಅವರು ಹೊಸ ಕಟ್ಟಡ ನಿರ್ಮಿಸುತ್ತಿದ್ದರು.
ಅವರ ಪತ್ನಿ ಮತ್ತು ಇತರರು ಪೊಲೀಸರಿಗೆ ನೀಡಿದ ಮಾಹಿತಿಯಂತೆ ರಾಯ್ ಮತ್ತು ಗುತ್ತಿಗೆದಾರ ಪುಲ್ಲೂರಿನ ನರೇಂದ್ರ ನಡುವೆ ಜಗಳ ನಡೆದಿತ್ತು. ನರೇಂದ್ರ ತನ್ನನ್ನು ಕಟ್ಟಡದಿಂದ ತಳ್ಳಿದ್ದಾನೆ ಎಂದು ರಾಯ್ ತನ್ನ ಪತ್ನಿ ಮತ್ತು ಇತರರಿಗೆ ತಿಳಿಸಿದ್ದ ಎನ್ನಲಾಗಿದೆ. ಆರಂಭದಲ್ಲಿ ಅವರನ್ನು ಮಾವುಂಗಾಲ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರ ಸ್ಥಿತಿ ಗಂಭೀರವಾದುದರಿಂದ ಮಂಗಳೂರಿಗೆ ಸ್ಥಳಾಂತರಿಸಲಾಯಿತು.
ಘಟನೆಯ ನಂತರ ಹೊಸದುರ್ಗ ಪೊಲೀಸರು ನರೇಂದ್ರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಈತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.