ಬೆಳ್ತಂಗಡಿ, ಆ. 14 (DaijiworldNews/AK: ಗುರುವಾಯನಕೆರೆಯಲ್ಲಿ ಕಾರಿನಲ್ಲಿ ಮೂರು ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಆರೋಪಿಗಳು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಚಾರ್ಮಾಡಿ ಮೂಲಕ ಮಂಗಳೂರು ಕಡೆಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಇನ್ನೋವಾ ಕಾರಿನಲ್ಲಿ ಅತಿ ವೇಗವಾಗಿ ದನಗಳನ್ನು ಸಾಗಿಸುತ್ತಿದ್ದರು ಎಂದು ವರದಿಯಾಗಿದೆ. ಗುರುವಾಯನಕೆರೆಯಲ್ಲಿ, ವಾಹನವು ಆಟೋರಿಕ್ಷಾ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ವಾಹನ ನಿಲ್ಲಿಸುವಂತೆ ಸೂಚಿಸಿದರು, ಆದರೆ ಶಂಕಿತರು ಆದೇಶವನ್ನು ನಿರ್ಲಕ್ಷಿಸಿ ಪರಾರಿಯಾಗಲು ಪ್ರಯತ್ನಿಸಿದರು.
ಮೂವರಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಚಾಲಕನನ್ನು ಮೂಡಬಿದಿರೆಯ ಸುವರ್ಣ ನಗರದ ಆರಿಫ್ (26) ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಆರೋಪಿಗಳನ್ನು ಮೂಡಬಿದಿರೆಯ ಸುವರ್ಣ ನಗರದ ನಿವಾಸಿಗಳಾದ ರಿಜ್ವಾನ್ (30) ಮತ್ತು ಸಾಯಿಲ್ (22) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂದು ದನ ಗಾಯಗೊಂಡಿದ್ದು, ಸ್ಥಳೀಯರು ಚಿಕಿತ್ಸೆ ನೀಡಿದ್ದಾರೆ.