ಕಾಸರಗೋಡು, ಆ. 23 (DaijiworldNews/AA): ಹೊಸದುರ್ಗ ಠಾಣಾ ವ್ಯಾಪ್ತಿಯ ಹತ್ತು ವರ್ಷದ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಕಿವಿಯೋಲೆಯನ್ನು ದರೋಡೆಗೈದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ತಪ್ಪಿತಸ್ಥರೆಂದು ಹೊಸದುರ್ಗ ಪೋಕ್ಸೋ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.

ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ಮಡಿಕೇರಿ ನಾಪೋಕ್ಲುವಿನ ಸಲಾಂ (39) ಮತ್ತು ಸಹೋದರಿ ಸುಹೈಬಾ (21) ಆರೋಪಿಗಳಾಗಿದ್ದಾರೆ. ತಲೆಮರೆಸಿಕೊಂಡಿದ್ದ ಸಲಾಂ ನನ್ನು ಮೇ 24ರಂದು ವಿಶೇಷ ತನಿಖಾ ತಂಡ ಆಂಧ್ರಪ್ರದೇಶದಿಂದ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಸುಹೈಬಾ ಬಾಲಕಿಯ ಚಿನ್ನಾಭರಣ ಮಾರಾಟ ಮಾಡಿದ ಪ್ರಕರಣದ ಆರೋಪಿಯಾಗಿದ್ದಾಳೆ.
2024ರ ಮೇ 15ರಂದು ಮುಂಜಾನೆ ಪಡನಕ್ಕಾಡ್ ನಲ್ಲಿರುವ ಮನೆಯಿಂದ ಮಗು ಮಲಗಿದ್ದಾಗ ಅಪಹರಿಸಿದ್ದ ದುಷ್ಕರ್ಮಿಯು ಆಕೆಯ ಚಿನ್ನದ ಕಿವಿಯೋಲೆಗಳನ್ನು ದೋಚಿಕೊಂಡು ಒಂದು ಕಿಲೋಮೀಟರ್ ದೂರದಲ್ಲಿ ಅವಳನ್ನು ಬಿಟ್ಟು ಪರಾರಿಯಾಗಿದ್ದ. ವೈದ್ಯಕೀಯ ವರದಿಯ ನಂತರ ಲೈಂಗಿಕ ದೌರ್ಜನ್ಯ ನಡೆದಿರುವುದೂ ದೃಢಪಟ್ಟಿತ್ತು.
ಬಾಲಕಿಯನ್ನು ಅಡುಗೆ ಮನೆಯ ಬಾಗಿಲಿನಿಂದ ಕರೆದೊಯ್ದು ಹತ್ತಿರದ ಗದ್ದೆಯಲ್ಲಿ ತೊರೆದು ಪರಾರಿ ಯಾಗಿದ್ದನು. ಅಲ್ಲಿಯೇ ಸಮೀಪದ ಮನೆಗೆ ತೆರಳಿ ಮಾಹಿತಿ ನೀಡಿದ ಬಾಲಕಿಯರು ತನ್ನ ಮನೆಯವರನ್ನು ಸಂಪರ್ಕಿಸಿದ್ದಾಳೆ. ಮನೆಯವರು ಕರೆದೊಯ್ದು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಎಸ್ಐಟಿಗೆ ತನಿಖೆ ಒಪ್ಪಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ 62 ಸಾಕ್ಷಿಗಳನ್ನು ವಿಸ್ತರಿಸಿತ್ತು. ಚಿನ್ನದ ಬೆಂಡೋಲೆ ಮಾರಾಟ ಮಾಡಲು ಸಹಾಯ ಮಾಡಿದ್ದರಿಂದ ಎರಡನೇ ಆರೋಪಿ ಎಂದು ಗುರುತಿಸಲಾಗಿತ್ತು.
ಉತ್ತರ ವಲಯ ಉಪ ನಿರೀಕ್ಷಕ ಥಾಮ್ಸನ್ ಜೋಸ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥ ಪಿ ಬಿಜೋಯ್ ನೇತೃತ್ವದ ತಂಡವು ತನಿಖೆಯ ಮೇಲ್ನೋಟ ವಹಿಸಿತ್ತು.
20 ಸದಸ್ಯರನ್ನೊಳಗೊಂಡ ಎಸ್ಐಟಿ ತನಿಖಾ ತಂಡದಲ್ಲಿ ಡಿವೈಎಸ್ಪಿಗಳಾದ ಲತೀಶ್, ಸಿ. ಕೆ ಸುನೀಲ್ಕುಮಾರ್ ಮತ್ತು ಪಿ ಬಾಲಕೃಷ್ಣನ್ ನಾಯರ್ ಅವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಎಂ. ಪಿ ಆಜಾದ್ ಮತ್ತು ಸಬ್ ಇನ್ಸ್ಪೆಕ್ಟರ್ಗಳಾದ ಅಖಿಲ್ ಮತ್ತು ಎಂಟಿಪಿ ಸೈಫುದ್ದೀನ್ ಮೊದಲಾದವರಿದ್ದರು.
ಸ್ವಂತ ಮೊಬೈಲ್ ಫೋನ್ ಬಳಸದ ಈತ ಬೇರೊಬ್ಬನ ಮೊಬೈಲ್ ಮೂಲಕ ಮನೆಯವರನ್ನು ಸಂಪರ್ಕಿಸಿದ್ದು, ಈ ನಂಬ್ರ ಕೇಂದ್ರೀಕರಿಸಿ ತನಿಖೆ ನಡೆಸಿದ ತನಿಖಾ ತಂಡ ಈತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿತ್ತು
ಬಾಲಕಿಯನ್ನು ಅಪಹರಿಸಿದ್ದ ದಿನ ಲಭಿಸಿದ್ದ ಸಿಸಿ ಟಿವಿ ದೃಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಈತನ ಚಲನವಲನಗಳನ್ನು ಗಮನಿಸಿದ ತನಿಖಾ ತಂಡಕ್ಕೆ ಆರೋಪಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿತ್ತು.