ಬಂಟ್ವಾಳ, ಅ. 06 (DaijiworldNews/AK): ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ನ. ೧೮ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆ ರವಿವಾರ ಸಂಜೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಅಭಿನಂದನಾ ಸಮಿತಿಯ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಮಾತನಾಡಿ, ಇಬ್ಬರು ನಾಯಕರು ಕೂಡ ಜಿಲ್ಲೆಯಾದ್ಯಂತ ಇರುವ ಧಾರ್ಮಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಈ ಅಭಿನಂದನಾ ಸಮಾರಂಭ ಆಯೋಜಿಸಲಾಗಿದ್ದು, ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿ ರಾಜಕೀಯ ರಹಿತವಾಗಿ ಈ ಸಮಾರಂಭ ಏರ್ಪಡಿಸಲಾಗಿದೆ.
ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ, ಸಮ್ಮಾನ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎಡನೀರು ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಸುಮಾರು ೧೫೦೦ ಮಂದಿಯ ನಿರೀಕ್ಷೆ ಇದೆ ಎಂದು ಕಾರ್ಯಕ್ರಮದ ರೂಪುರೇಖೆಯನ್ನು ವಿವರಿಸಿದರು.
ಸಮಿತಿಯ ಪ್ರಧಾನ ಸಂಚಾಲಕ ಜಗನ್ನಾಥ ಚೌಟ ಬದಿಗುಡ್ಡೆ ಮಾತನಾಡಿ, ಅವರ ಸೇವೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ್ದಾಗಿದ್ದು, ಇದರಿಂದ ಅವರಿಗೂ ಸಮಾಜ ನಮ್ಮನ್ನು ನೆನಪಿಟ್ಟುಕೊಂಡಿದೆ ಎಂಬ ಸಾರ್ಥಕತೆಯ ಭಾವನೆ ಬರಬೇಕು. ಹೀಗಾಗಿ ಎಲ್ಲೂ ಕೂಡ ಗೊಂದಲವಿಲ್ಲದೆ ಸಮಾರಂಭ ಆಯೋಜನೆಗೊಳ್ಳಬೇಕು ಎಂದರು.
ನ್ಯಾಯವಾದಿಗಳಾದ ಚಂದ್ರಶೇಖರ ಪೂಜಾರಿ, ರವೀಂದ್ರ ಕುಕ್ಕಾಜೆ, ಸಾಮಾಜಿಕ ಮುಂದಾಳು ಕಿಶೋರ್ ಭಂಡಾರಿ ಬೆಳ್ಳೂರು ಮೊದಲಾದವರು ಸಲಹೆ-ಸೂಚನೆಗಳನ್ನು ನೀಡಿದರು. ಕಾರಂಬಡೆ ಕ್ಷೇತ್ರದ ಧರ್ಮದರ್ಶಿ ಅರುಣ್ ಕಾರಂಬಡೆ, ನಂದಾವರ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು, ಉದ್ಯಮಿ ಜಗತ್ ಪೂಜಾರಿ, ಸಮಿತಿಯ ಕೋಶಾಽಕಾರಿ ರಾಮ್ಗಣೇಶ್ ಪ್ರಭು ಬಿ.ಸಿ.ರೋಡು, ಜತೆ ಕಾರ್ಯದರ್ಶಿ ಶೈಲೇಶ್ ಕುಚ್ಚಿಗುಡ್ಡೆ ಮೊದಲಾದವರಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ಸ್ವಾಗತಿಸಿದರು. ಅನಾರು ಕೃಷ್ಣ ಶರ್ಮ ವಂದಿಸಿದರು.