ಉಡುಪಿ, ಡಿ. 18(DaijiworldNews/TA): ಗೃಹಲಕ್ಷ್ಮೀ ಯೋಜನೆ ಹಣ ಜಮಾ ಆಗಿರುವ ಬಗ್ಗೆ ನಾನು ಸದನಕ್ಕೆ ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಈವರೆಗೆ 23 ಕಂತುಗಳ ಹಣವನ್ನು ಫಲಾನುಭವಿಗಳ ಖಾತೆ ಸಂದಾಯ ಮಾಡಲಾಗಿದೆ ಎಂದು ತಿಳಿಸಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾವು ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಾಗಿನಿಂದಲೂ ಈ ಯೋಜನೆಯನ್ನು ಬಿಜೆಪಿ ನಾಯಕರು ಟೀಕಿಸುತ್ತಲೇ ಬಂದಿದ್ದರು. ಹಾದಿ ಬೀದಿಯಲ್ಲಿ ಯೋಜನೆ ವಿರುದ್ಧ ಹೋರಾಟ ಮಾಡಿ ಮಾತನಾಡುತ್ತಿದ್ದರು. ಈಗ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗಿದ್ದು, ಕೋಟ್ಯಂತರ ಮಹಿಳೆಯರ ಬದುಕಿಗೆ ಆಸರೆಯಾಗಿದೆ. ಈಗ ಇದ್ದಕ್ಕಿದಂತೆ ಬಿಜೆಪಿ ನಾಯಕರಿಗೆ ಗೃಹಲಕ್ಷ್ಮೀ ಯೋಜನೆ ಬಗ್ಗೆ ಕಾಳಜಿ ಶುರುವಾಗಿದೆ.
ಎರಡು ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಖಾತೆಗೆ ಜಮಾ ಆಗಿಲ್ಲ. ಅದನ್ನು ಹಾಕಿಸುವ ಕೆಲಸ ಮಾಡುತ್ತೇವೆ. ಗೃಹಲಕ್ಷ್ಮೀ ಯೋಜನೆ ಬಗ್ಗೆ ಯಾವುದೇ ಗೊಂದಲವೂ ಇಲ್ಲ, ಗೊಂದಲಗಳೂ ಬೇಡ. ಅನಗತ್ಯವಾಗಿ ಬಿಜೆಪಿಯವರು ಗೃಹಲಕ್ಷ್ಮೀ ಯೋಜನೆ ಯಶಸ್ಸಿಗೆ ಮಸಿಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂತುಗಳ ಲೆಕ್ಕದಲ್ಲಿ ನಾನು ಸದನಕ್ಕೆ ಮಾಹಿತಿ ನೀಡಿದ್ದೆ. ಆದರೆ, ಫೆಬ್ರವರಿ, ಮಾರ್ಚ್ ತಿಂಗಳ ಹಣ ಸಂದಾಯ ಆಗಿಲ್ಲ ಎಂದು ವಿರೋಧ ಪಕ್ಷದವರು ಪ್ರಶ್ನಿಸಿದಾಗ, ನಾನು ಹಣಕಾಸು ಇಲಾಖೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿದೆ. ನಾನು ಇದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಜಮಾ ಆಗಿಲ್ಲದಿದ್ದರೆ ಹಣವನ್ನು ಹಾಕುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.