ಮಂಗಳೂರು, ಡಿ. 18 (DaijiworldNews/AK):ಗುರುಪುರ ದೋಣಿಂಜೆಗುತ್ತು ಗಡಿ ಪ್ರಧಾನರಾದ ಶ್ರೀ ಪ್ರಮೋದ್ ಕುಮಾರ್ ರೈ ರವರ ಅಧ್ಯಕ್ಷತೆಯಲ್ಲಿ ಯತಿವರ್ಯರ ಮತ್ತು ತಂತ್ರಿವರ್ಯರ ಅನುಗ್ರಹ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಅರಮನೆ. ಬೀಡುಗಳ ಅರಸರುಗಳ ಹಾಗೂ ಗುತ್ತು ಮನೆತನದ ಗಡಿಕಾರರ ಹಾಗೂ ಯಜಮಾನರುಗಳ ಸಮಕ್ಷಮದಲ್ಲಿ ವಿಶ್ವ ಹಿಂದೂ ಪರಿಷತ್, ಹಿಂದೂ ಯುವಸೇನೆ ಹಾಗೂ ತುಳುನಾಡ ರಕ್ಷಣಾ ವೇದಿಕೆಯ ಸಹಕಾರದೊಂದಿಗೆ ಧರ್ಮಾವಲೋಕನ ಸಭೆ ಡಿ.21ರ ಆದಿತ್ಯ ವಾರ ಶ್ರೀ ಮಾರಿಯಮ್ಮ ದೇವಸ್ಥಾನ ಸಭಾಂಗಣ ಉರ್ವ ಬೋಳೂರಿನಲ್ಲಿ ನಡೆಯಲಿದೆ ಎಂದು ಅಧ್ಯಕ್ಷರಾದ ಪ್ರಮೋದ್ ರೈ ದೋಣಿಂಜೆ ಗುತ್ತುವರವರು ತಿಳಿಸಿದ್ದಾರೆ. ಈ ಕಾರ್ಯಕ್ರಮ ಧರ್ಮಾಚರಣೆಯ ಒಂದು ಅವಲೋಕನವಾಗಿದ್ದು ತೌಳವ ಪರಂಪರೆಯ ಆಚರಣೆಯಲ್ಲಿ ಬರುವ ವಿಧಿ-ವಿಧಾನಗಳ ಬಗ್ಗೆ ಮಾಹಿ ನೀಡಲಿದ್ದಾರೆ.

'ಸನಾತನ ಹಿಂದೂ ಧರ್ಮ ಸಾವಿರಾರು ವರ್ಷಗಳ ಇತಿಹಾಸವಿರುವ ಅತ್ಯಂತ ಪ್ರಾಚೀನ ಧರ್ಮವಾಗಿದ್ದು, ಧರ್ಮ, ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಮೂಲ ಕಟ್ಟುಪಾಡುಗಳನ್ನು ಪೋಷಿಸುತ್ತಾ ಬಂದಿದೆ. ಸನಾತನ ಪರಂಪರೆಯಲ್ಲಿನ ಧರ್ಮಾಚರಣೆ, ಸತ್ ಸಂಪ್ರದಾಯ, ಆಚಾರ ವಿಚಾರಗಳನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಸಂಸ್ಕಾರಯುತವಾಗಿ ಹಸ್ತಾಂತರಿಸಬೇಕಾದ ಕರ್ತವ್ಯ ಮತ್ತು ಹೊಣೆಗಾರಿಕೆ ನಮ್ಮದಾಗಿದ್ದು. ಈ ಬಗ್ಗೆ ಸಮಗ್ರ ಅವಲೋಕನ ನಡೆಸಿ, ನಮ್ಮ ತೌಳವ ಪರಂಪರೆಯಲ್ಲಿ ಬರುವ ದೇವಸ್ಥಾನ, ದೈವಸ್ಥಾನ, ನಾಗಾರಾಧನೆ ಹಾಗೂ ಇನ್ನಿತರ ಆರಾಧನಾ ಪದ್ಧತಿಗಳಲ್ಲಿ ನಮ್ಮ ನೆಲದ ಸಂಸ್ಕೃತಿಯನ್ನು ಕಟ್ಟುಪಾಡುಗಳನ್ನು ನಿರಂತರವಾಗಿ ಪಾಲಿಸಿಕೊಂಡು ಬರುವ ಸದುದ್ದೇಶದಿಂದ ಸಂಬಂಧಪಟ್ಟ ಅರಮನೆ, ಬೀಡುಗಳು, ಗುತ್ತು ಮನೆತನಗಳು, ಸೇವಾದಾರರುಗಳು ಹಾಗೂ ಸಮಸ್ತ ಸನಾತನ ಧರ್ಮೀಯರನ್ನು ಒಟ್ಟು ಸೇರಿಸಿ ಸಮಾಲೋಚನೆ ನಡೆಸುವ ಸದುದ್ದೇಶದಿಂದ ಈ ಸಭೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮ ವಿವಿಧ ವರ್ಗಗಳ ಪ್ರಮುಖರ ಸಾರಥ್ಯದಲ್ಲಿ, ದರ್ಶನ ಪಾತ್ರಿಗಳ, ದೈವ ನರ್ತಕರ ಹಾಗೂ ಗಣ್ಯರ ಪಸ್ಥಿತಿಯಲ್ಲಿ ಸಮಾಲೋಚನೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಹಿಂದೂ ಬಾಂಧವರು ಒಟ್ಟಾಗಿ ಒಂದೇ ತಾಯಿಯ ಮಕ್ಕಳಂತೆ ಜಾತಿ-ಪಂಥ, ವರ್ಗ ಭೇದಗಳನ್ನು ಮರೆತು ಬಂದು ಸನಾತನ ಹಿಂದೂ ಧರ್ಮ-ಸಂಸ್ಕೃತಿ-ಪರಂಪರೆ ಹಾಗೂ ಮೂಲ ಕಟ್ಟುಪಾಡುಗಳನ್ನು ಉಳಿಸಿ ಬೆಳೆಸಲು ಹಾಗೂ ಧನಾತ್ಮಕ ಸಲಹೆಗಳನ್ನು ನೀಡಿ ಸಮರಸಪೂರ್ಣ ಸಮಾಜವನ್ನು ಸದೃಢಗೊಳಿಸುವ ಕಾರ್ಯದಲ್ಲಿ ಕೈ ಜೋಡಿಸಲು ಅಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ್ ಅಧಿಕಾರಿ,ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜೆಪ್ಪು,ಜನಾರ್ಧನ ಅರ್ಕುಳ,ಕಿರಣ್ ಉಪಾಧ್ಯಾಯ ಹಾಗೂ ಕಮಲಾಕ್ಷ ಪಂಬದ ಪ್ರವೀಣ್ ಕುತ್ತಾರ್ ರವರು ಉಪಸ್ಥಿತರಿದ್ದರು.