ಮಂಗಳೂರು, ಡಿ. 31 (DaijiworldNews/TA): ಬ್ರಾಹ್ಮಣ ಸಮುದಾಯ ವೈದಿಕ ಅಧ್ಯಯನವನ್ನು ನಿರ್ಲಕ್ಷಿಸಬಾರದು. ಮಕ್ಕಳಿಗೂ ವೈದಿಕ ಆಧ್ಯಯನದ ಮಹತ್ವದ ಬಗ್ಗೆ ತಿಳಿಹೇಳಬೇಕು. ಹಿಂದೆ ಲೋಪ ಆಗಿದ್ದರೆ ಅದನ್ನು ಸರಿಪಡಿಸಲು ಇನ್ನೂ ಅವಕಾಶ ಇದೆ ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿ ಹೇಳಿದರು.

ಮಂಗಳೂರು ಕರಾಡ ಬ್ರಾಹ್ಮಣ ಸಮಾಜದ ರಜತ ಮಹೋತ್ಸವದ ಅಂಗವಾಗಿ ನಗರದ ಬಾಳಂ ಭಟ್ ಸಭಾಂಗಣದಲ್ಲಿ ಮಂಗಳವಾರ ನಡೆದ ಅಕ್ಷರ ಲಕ್ಷ ಗಾಯತ್ರಿ ಮಹಾಯಾಗದ ಪೂರ್ಣಾಹುತಿ ಮಾಡಿ ಬಳಿಕ ಆಶೀರ್ವಚನ ಅವರು ನೀಡಿದರು. ಧರ್ಮಕ್ಕೆ ಬರುವ ಸಂಕಷ್ಟಗಳನ್ನು ಕಾಪಾಡಲು ನಾವು ಕೂಡಾ ಭಗವಂತನ ಹಾದಿಯಲ್ಲಿ ಮುನ್ನಡೆಯಬೇಕು ಎಂದರು. ಕಟೀಲು ಕ್ಷೇತ್ರದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಹಿಂದೂ ದರ್ಮ ಅತ್ಯಂತ ಶಕ್ತಿಶಾಲಿಯಾದ ಧರ್ಮ. ಇದಕ್ಕೆ ಕಾರಣ ಇಲ್ಲಿನ ವೈದಿಕ ಪರಂಪರೆ. ಆದರೆ ಇದನ್ನು ಬ್ರಿಟಿಷ್ ಆಡಳಿತ ಒಡೆಯುವ ಪ್ರಯತ್ನ ಮಾಡಿತ್ತು. ಇಂದಿಗೂ ಅಂತಹಾ ಪ್ರಯತ್ನ ಆಗಾಗ ನಡೆಯುತ್ತಿದೆ. ಅದಕ್ಕಾಗಿ ವೈದಿಕ ಪರಂಪರೆಯ ಎಲ್ಲರೂ ಒಟ್ಟಾಗಿರಬೇಕು ಎಂದರು.
ಈ ಸಂದರ್ಭ ಖಂಡೇರಿ ಅನಂತ ಶಾಸ್ತ್ರಿ ಬರೆದ 120 ಶ್ಲೋಕಗಳನ್ನು ಒಳಗೊಂಡ 'ಅಗಲ್ಪಾಡಿ ಮಹಾತ್ಮೆ' ಇದರ ಕನ್ನಡ ಅನುವಾದ ಪುಸ್ತಕವನ್ನು ಜಗದ್ಗುರುಗಳು ಲೊಕಾಪರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್ ಅಡಳಿತ ನಿರ್ದೇಶಕ ರಾಘವೇಂದ್ರ ಭಟ್ , ಶರವು ದೇವಸ್ಥಾನದ ಶಿಲೆ ಶಿಲೆ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ, ಮಂಗಳೂರು ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಿವಶಂಕರ ಭಟ್ ಕನ್ನಡ್ಕ, ಕರಾಡ ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷ ಗಿರಿಧರ ಭಟ್ ಪರಾಡ್ಕರ್, ಡಾ.ಸತ್ಯಕೃಷ್ಣ ಭಟ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ಕರಾಡ ಮಹಿಳಾ ಘಟಕದ ಅಧ್ಯಕ್ಷೆ ಸುಧಾ ಎಸ್.ವಿ.ಭಟ್, ಮಂಗಳೂರು ಕರಾಡ ಬ್ರಾಹ್ಮಣ ಸಮಾಜದ ಮಾಜಿ ಅಧ್ಯಕ್ಷರಾದ ಕೋಳಿಕ್ಕಜೆ ಬಾಲಕೃಷ್ಣ ಭಟ್, ಎಸ್.ವಿ.ಭಟ್, ಮಠದಮೂಲೆ ಪುರುಷೋತ್ತಮ ಭಟ್, ಅನಂತಶಯನ ಭಟ್, ಕೋಳಿಕ್ಕಜೆ ಬಾಲಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದರು.