ಬೆಳ್ತಂಗಡಿ/ಕಾರ್ಕಳ, ಫೆ. 21 (DaijiworldNews/AA): ಬೆಳ್ತಂಗಡಿ ಮತ್ತು ಕಾರ್ಕಳ ತಾಲೂಕಿನ ಗಡಿ ಭಾಗದ ಹಲವು ಗ್ರಾಮಗಳಲ್ಲಿ ಶನಿವಾರ ಅನಿರೀಕ್ಷಿತ ಮಳೆಯಾಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ರೈತರಲ್ಲಿ ಸಂತಸ ತಂದಿದೆ.

ಶನಿವಾರ ಸಂಜೆ ಈ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಕೆಲವು ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾದ ಬಗ್ಗೆ ವರದಿಯಾಗಿದೆ. ಕಾರ್ಕಳ ತಾಲೂಕಿನ ನೆಲ್ಲಿಕಾರು ಸುತ್ತಮುತ್ತ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಉತ್ತಮ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ನಾರಾವಿ, ಕಡಿರುದ್ಯಾವರ ಮತ್ತು ಕಾಶಿಪಟ್ಣ ಪರಿಸರದಲ್ಲಿಯೂ ಮಳೆ ಸುರಿದಿದೆ.
ಕಳೆದ ಕೆಲವು ವಾರಗಳಿಂದ ಈ ಭಾಗದಲ್ಲಿ ಒಣ ಹವಮಾನವಿದ್ದು, ಬಿಸಿಲ ಬೇಗೆ ಹೆಚ್ಚಾಗಿತ್ತು. ಈ ಅಕಾಲಿಕ ಮಳೆಯು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದ್ದು, ನೀರಿನ ಮೂಲಗಳು ಮರುಪೂರಣಗೊಳ್ಳಲು ಸಹಕಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಗಡಿ ಗ್ರಾಮಗಳಲ್ಲಿ ಬೆಳೆಗಳಿಗೆ ಈ ಮಳೆ ಹೊಸ ಚೈತನ್ಯ ನೀಡಲಿದ್ದು, ಒಣಗುತ್ತಿದ್ದ ಕೃಷಿ ಭೂಮಿಗೆ ಈ ಮಳೆ ವರದಾನವಾಗಿ ಪರಿಣಮಿಸಿದೆ ಎಂದು ರೈತರು ತೃಪ್ತಿ ವ್ಯಕ್ತಪಡಿಸಿದ್ದಾರೆ.