ಉಪ್ಪಿನಂಗಡಿ, ಫೆ. 22 (DaijiworldNews/AA): ಕಬಕ ಪುತ್ತೂರು ರೈಲ್ವೇ ನಿಲ್ದಾಣದ ಹಾರಾಡಿ ಸೇತುವೆಯ ಸಮೀಪ ಶುಕ್ರವಾರ ರೈಲು ಢಿಕ್ಕಿಯಾಗಿ ಯುವಕನೋರ್ವ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಈತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೆಳಕಿಗೆ ಬಂದಿದೆ.

ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ಬಳಿಯ ಗೌಂಡತ್ತಿಗೆ ನಿವಾಸಿ ಪವನ್ ಕುಮಾರ್ (26) ಮೃತ ಯುವಕ.
ವ್ಯಾಪಾರಿ ಹಡಗೊಂದರಲ್ಲಿ ಉದ್ಯೋಗಿಯಾಗಿದ್ದ ಪವನ್ ಕೆಲವು ತಿಂಗಳಿನಿಂದ ಕೆಲಸಕ್ಕೆ ತೆರಳದೇ ಮನೆಯಲ್ಲೇ ಇದ್ದರು. ನಿನ್ನೆ ಮಧ್ಯಾಹ್ನ ಮನೆ ಬಿಟ್ಟು ಹೋಗಿದ್ದ ಈತ ತಾಯಿ ಬಳಿ ನಾನು ಸಾಯುತ್ತೇನೆ ಎಂದು ಹೇಳಿದ್ದರಂತೆ. ಅಲ್ಲದೇ ತನ್ನ ಇನ್ಸ್ಟಾಗ್ರಾಂ ಅಕೌಂಟ್ನ ಡಿಪಿಯಲ್ಲೂ 'ಐ ಆ್ಯಮ್ ಡೆಡ್' ಅನ್ನೋ ಡಿಪಿ ಹಾಕಿದ್ದಾರೆ.
ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಬಳಿಯ ಹಾರಾಡಿ ಬ್ರಿಡ್ಜ್ ಸಮೀಪ ಫೆ.20ರಂದು ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಢಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ರೈಲಿನ ಪೈಲಟ್ ಸ್ಟೇಷನ್ಗೆ ಮಾಹಿತಿ ನೀಡಿದ್ದರು. ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮಂಗಳೂರಿಗೆ ರವಾನಿಸಲಾಗಿತ್ತು.
ಮಗ ಮನೆಯಿಂದ ಹೋದವ ಹಿಂದಿರುಗಿ ಬರಲಿಲ್ಲವೆಂದು ಪವನ್ ತಾಯಿ ರಾತ್ರಿ ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಸದಸ್ಯ ಸುರೇಶ್ ಅತ್ರಮಜಲು ಅವರಿಗೆ ತಿಳಿಸಿದ್ದಾರೆ. ಪವನ್ ಬಗ್ಗೆ ಅವರು ಮಾಹಿತಿ ಕಲೆ ಹಾಕುತ್ತಿದ್ದಾಗ ರೈಲ್ವೇ ಹಳಿಯಲ್ಲಿ ಮೃತದೇಹ ಪತ್ತೆಯಾಗಿರುವ ವಿಚಾರ ತಿಳಿದುಬಂತು. ಪರಿಶೀಲನೆ ನಡೆಸಿದಾಗ ಇದು ಪವನ್ ಮೃತದೇಹ ಎಂಬುದಾಗಿ ತಿಳಿದುಬಂದಿದೆ.
ಮೃತನ ಕುಟುಂಬವು ತೀರಾ ಬಡಕುಟುಂಬವಾಗಿದ್ದು, ತಂದೆಯಿಲ್ಲದ ಈತನನ್ನು ತಾಯಿ ಕೂಲಿ ಕೆಲಸ ಮಾಡಿ ಓದಿಸಿ ಬೆಳೆಸಿದ್ದರು. ಈತನ ಸಹೋದರಿಯೂ ಕೂಡಾ ಅರ್ಧದಲ್ಲೇ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದಳು. ಇನ್ನು ಮಾನಸಿಕ ಖಿನ್ನತೆಯೇ ಪವನ್ ಆತ್ಮಹತ್ಯೆಗೆ ಶರಣಾಗಲು ಕಾರಣ ಎನ್ನಲಾಗಿದೆ.