ಉಡುಪಿ, ಫೆ. 22 (DaijiworldNews/AA): ಉಡುಪಿ ಧರ್ಮಪ್ರಾಂತ್ಯಕ್ಕೆ ಹೊಸದಾಗಿ ಬಿಷಪ್ ಆಗಿ ನೇಮಕಗೊಂಡ ಮೊನ್ಸಿಂಜೋರ್ ಡಾ. ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ಅವರು ಏಪ್ರಿಲ್ 20, 2026 ರಂದು ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ. ನಡೆಯುವ ಐತಿಹಾಸಿಕ ಸಮಾರಂಭದಲ್ಲಿ ಬಿಷಪ್ ಆಗಿ ದೀಕ್ಷೆ ಯನ್ನು ಸ್ವೀಕರಿಸಲಿದ್ದಾರೆ.

ಜನವರಿ 31, 2026 ರಂದು ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ಲಿಯೋ XIV ಅವರು ಉಡುಪಿಯ ರೋಮನ್ ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಆಗಿ ನೇಮಿಸಿದರು.
ನೂತನ ಧರ್ಮಾಧ್ಯಕ್ಷರ ಎಪಿಸ್ಕೋಪಲ್ ದೀಕ್ಷೆ ಸಮಾರಂಭ ಮತ್ತು ಅಧಿಕೃತ ಅಧಿಕಾರ ಸ್ವೀಕಾರ ಸಮಾರಂಭವು ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಕಾರ್ಡಿನಲ್ಗಳು, ಆರ್ಚ್ ಬಿಷಪ್ಗಳು ಮತ್ತು ಭಾರತದಾದ್ಯಂತ ವಿವಿಧ ಧರ್ಮಪ್ರಾಂತ್ಯದ 30 ಕ್ಕೂ ಹೆಚ್ಚು ಧರ್ಮಾಧ್ಯಕ್ಷರ, ಜೊತೆಗೆ ದೊಡ್ಡ ಸಂಖ್ಯೆಯ ಧರ್ಮಗುರುಗಳು , ಧಾರ್ಮಿಕ ಸಹೋದರಿಯರು ಮತ್ತು ಭಕ್ತದಿಗಳು ಈ ಐತಿಹಾಸಿಕ ಸಂದರ್ಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಉಡುಪಿಯ ಬಿಷಪ್ ಆಗಿ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರ ನಂತರ ಮೊನ್ಸಿಂಜೋರ್ ಡಾಕ್ಟರ್ ಲೆಸ್ಲಿ ಕ್ಲಿಫರ್ಡ್ ಡಿ'ಸೋಜಾ ನೇಮಕಗೊಂಡಿದ್ದಾರೆ. ಬಿಷಪ್ ಲೋಬೊ ಅವರ ರಾಜೀನಾಮೆಯನ್ನು ಜಗದ್ಗುರು ಪೋಪ್ ಲಿಯೋ 14 ರವರು ಅಂಗೀಕರಿಸಿದ್ದು , ಅವರು ಹೊಸ ಬಿಷಪ್ ಔಪಚಾರಿಕವಾಗಿ ಅಧಿಕಾರ ವಹಿಸಿಕೊಳ್ಳುವವರೆಗೆ ಧರ್ಮಪ್ರಾಂತ್ಯದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಲಿದ್ದಾರೆ.
ವಂದನೀಯ ರೆವ. ಫಾ. (ಡಾ.) ಲೆಸ್ಲಿ ಕ್ಲಿಫರ್ಡ್ ಅವರು 1962ರ ಆಗಸ್ಟ್ 19ರಂದು ಕರ್ನಾಟಕದ ಉಡುಪಿ ಜಿಲ್ಲೆಯ ಉಚ್ಚಿಲ (ಎರ್ಮಾಳ್) ಗ್ರಾಮದಲ್ಲಿ ಲಾರೆನ್ಸ್ ಡಿಸೋಜಾ ಮತ್ತು ಸಿಸಿಲಿಯಾ ದಂಪತಿಗಳ ಪುತ್ರರಾಗಿ ಜನಿಸಿದರು. ದೈವಿಕ ಕ್ರೈಸ್ತ ಪರಂಪರೆಯ ಕುಟುಂಬದಲ್ಲಿ ಬೆಳೆದ ಅವರು, ಎಂಟು ಸಹೋದರ-ಸಹೋದರಿಯರ ದೊಡ್ಡ ಕುಟುಂಬಕ್ಕೆ ಸೇರಿದವರು. ಕುಟುಂಬದ ನಂಬಿಕೆ ಮತ್ತು ಮೌಲ್ಯಗಳು ಅವರ ಧಾರ್ಮಿಕ ಜೀವನಕ್ಕೆ ಮಹತ್ವದ ಪ್ರೇರಣೆಯಾಗಿವೆ. ಅವರ ಹಿರಿಯ ಸಹೋದರಿಯರಾದ ದಿವಂಗತ ವೆರೋನಿಕಾ ಡಿಸೋಜಾ ಹಾಗೂ ದಿವಂಗತ ಕ್ರಿಸ್ಟಿನ್ ಡಿಸೋಜಾ ನಿಧನರಾಗಿದ್ದು ಉಳಿದ ಸಹೋದರ-ಸಹೋದರಿಯರು ಪ್ರಾರ್ಥನೆಗಳ ಮೂಲಕ ಅವರನ್ನು ಸದಾ ಬೆಂಬಲಿಸುತ್ತಿದ್ದಾರೆ.
ಅವರ ಪ್ರಾಥಮಿಕ ಶಿಕ್ಷಣ ಉಚ್ಚಿಲದ ಸರಸ್ವತಿ ಮಂದಿರ ಹೈಯರ್ ಪ್ರೈಮರಿ ಶಾಲೆಯಲ್ಲಿ (1969–1976) ಆರಂಭಗೊಂಡಿತು. ಬಳಿಕ ಎರ್ಮಾಳಿನ ಸರ್ಕಾರಿ ಮೀನುಗಾರಿಕಾ ಪ್ರೌಢಶಾಲೆಯಲ್ಲಿ (1976–1979) ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಅದಮಾರಿನ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ (1979–1981) ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಪಡೆದರು.
ದೇವರ ಕರೆಗೆ ಸ್ಪಂದಿಸಿದ ಫಾ. ಲೆಸ್ಲಿ ಅವರು ಯಾಜಕ ತರಬೇತಿಯೊಂದಿಗೆ ಉನ್ನತ ಶಿಕ್ಷಣ ಮುಂದುವರಿಸಿದರು. ಮಂಗಳೂರು ಸಂತ ಜೋಸೆಫ್ ಅಂತರ-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡುವಾಗ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ (1982–1985) ಪಡೆದರು. ನಂತರ ರೋಮ್ನ ಪಾಂಟಿಫಿಕಲ್ ಉರ್ಬಾನಿಯಾನಾ ವಿಶ್ವವಿದ್ಯಾಲಯದಿಂದ ಧರ್ಮಶಾಸ್ತ್ರದಲ್ಲಿ ಬ್ಯಾಚುಲರ್ ಪದವಿ (1986–1990) ಪಡೆದರು.
ಅವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. (1991–1993), ಬೆಂಗಳೂರು ಮನೋವಿಜ್ಞಾನ ಮತ್ತು ತರಬೇತಿ ಸಂಸ್ಥೆಯಿಂದ ಡೆಪ್ತ್ ಸೈಕಾಲಜಿ ಮತ್ತು ಫಾರ್ಮೇಷನ್ ಡಿಪ್ಲೊಮಾ (1993–1995) ಪಡೆದಿದ್ದಾರೆ. ಬಳಿಕ ಬೆಲ್ಜಿಯಂನ ಲುವೇನ್ನ ಕ್ಯಾಥೊಲಿಕ್ ವಿಶ್ವವಿದ್ಯಾಲಯದಿಂದ ಧರ್ಮಶಾಸ್ತ್ರದಲ್ಲಿ ಲಿಸೆನ್ಸಿಯೇಟ್ (1997–1999) ಹಾಗೂ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ (1999–2003) ಪಡೆದಿದ್ದಾರೆ.
ಫಾ. ಲೆಸ್ಲಿ ಅವರು 1990ರ ಮೇ 10ರಂದು ಮಂಗಳೂರು ಧರ್ಮಪ್ರಾಂತ್ಯಕ್ಕೆ ಯಾಜಕರಾಗಿ ಅಭಿಷೇಕಗೊಂಡರು. ಅವರ ಯಾಜಕ ಸೇವೆ ಕುಂದಾಪುರದ ಹೋಲಿ ರೋಸರಿ ದೇವಾಲಯದಲ್ಲಿ ಸಹಾಯಕ ಧರ್ಮಗುರುವಾಗಿ (1990–1992) ಹಾಗೂ ಮಂಗಳೂರಿನ ಕುಲಶೇಖರದ ಹೋಲಿ ಕ್ರಾಸ್ ದೇವಾಲಯದಲ್ಲಿ (1992–1995) ಆರಂಭವಾಯಿತು. ಅವರು ಮಂಗಳೂರಿನ ಸಂತ ಜೋಸೆಫ್ ಅಂತರ-ಧರ್ಮಪ್ರಾಂತ್ಯ ಸೆಮಿನರಿಯಲ್ಲಿ ನೈತಿಕ ಧರ್ಮಶಾಸ್ತ್ರದ ಪ್ರಾಧ್ಯಾಪಕರಾಗಿಯೂ ಮತ್ತು ತರಬೇತಿದಾರರಾಗಿಯೂ (1995–1997) ಸೇವೆ ಸಲ್ಲಿಸಿದ್ದು, 2013ರವರೆಗೆ ಅತಿಥಿ ಪ್ರಾಧ್ಯಾಪಕರಾಗಿ ಮುಂದುವರಿಸಿದರು.
ಪಾಂಗ್ಲಾ/ಶಂಕರಪುರದ ಸಂತ ಜಾನ್ ದಿ ಎವಾಂಜೆಲಿಸ್ಟ್ ದೇವಾಲಯದ ಧರ್ಮಗುರುಗಳಾಗಿ (2010–2017) ಹಾಗೂ ನಂತರ ಕಲ್ಯಾಣಪುರ-ಸಂತೆಕಟ್ಟೆಯ ಮೌಂಟ್ ರೋಸರಿ ದೇವಾಲಯದ ಧರ್ಮಗುರುಗಳಾಗಿ (2017–2022) ಸೇವೆ ಸಲ್ಲಿಸುವ ಮೂಲಕ ಅವರು ತಮ್ಮ ಧಾರ್ಮಿಕ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಈ ಅವಧಿಯಲ್ಲಿ ಅವರು ಶಿಕ್ಷಣ ಸಂಸ್ಥೆಗಳ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಜೂನ್ 2022ರಿಂದ ಫಾ. ಲೆಸ್ಲಿ ಅವರು ಶಿರ್ವದ ಶೋಕಮಾತಾ ದೇವಾಲಯದ ಧರ್ಮಗುರುಗಳಾಗಿಯೂ, ಡಾನ್ ಬಾಸ್ಕೋ ಹಾಗೂ ಸೈಂಟ್ ಮೇರೀಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ, ಉಡುಪಿ ಧರ್ಮಪ್ರಾಂತ್ಯದ ಆಡಳಿತ ಮತ್ತು ನಿರ್ವಹಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು 2022ರಿಂದ 2025ರವರೆಗೆ ಯಾಜಕರ ಮಂಡಳಿಯ ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಶಿರ್ವ ವಲಯದ ಪ್ರಧಾನ ಧರ್ಮಗುರುಗಳಾಗಿ, ಉಡುಪಿ ಧರ್ಮಪ್ರಾಂತ್ಯದ ಧಾರ್ಮಿಕ ನ್ಯಾಯಮಂಡಳಿಯ ವಕೀಲ ಹಾಗೂ ಸಲಹೆಗಾರರ ಮಂಡಳಿಯ ಸದಸ್ಯರಾಗಿಯೂ (2023ರಿಂದ ಇಂದಿನವರೆಗೆ) ಸೇವೆ ಸಲ್ಲಿಸುತ್ತಿದ್ದಾರೆ.