ಕುಂದಾಪುರ, ಫೆ. 22 (DaijiworldNews/AA): ಮರವಂತೆಯ ಮಾರಸ್ವಾಮಿ ದೇವಸ್ಥಾನದ ಎದುರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಡಲತೀರದಲ್ಲಿ ಶನಿವಾರ ಮಧ್ಯಾಹ್ನ ವೇಳೆಗೆ ನೂರಾರು ಸಂಖ್ಯೆಯಲ್ಲಿ ಭೂತಾಯಿ ಮೀನುಗಳು ಅಲೆಗಳ ಮೂಲಕ ದಡಕ್ಕೆ ತೇಲಿ ಬಂದಿದ್ದು, ಮೀನುಗಳನ್ನು ಹೆಕ್ಕಲು ಸ್ಥಳೀಯರು ಮತ್ತು ಪ್ರವಾಸಿಗರು ಮುಗಿಬಿದ್ದಿದ್ದಾರೆ.

ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವಿರಾರು ಭೂತಾಯಿ ಮೀನುಗಳು ಮರಳಿನ ಮೇಲೆ ಬಂದು ಬಿದ್ದಿದ್ದವು. ಈ ದೃಶ್ಯವನ್ನು ಕಂಡ ಕೂಡಲೇ ವಾಹನ ಸವಾರರು, ಪ್ರವಾಸಿಗರು ಮತ್ತು ಸ್ಥಳೀಯ ಮೀನುಗಾರರು ಚೀಲ, ಬುಟ್ಟಿಗಳೊಂದಿಗೆ ಮೀನುಗಳನ್ನು ಹೆಕ್ಕಲು ಮುಂದಾದರು. ಕಡಲತೀರದುದ್ದಕ್ಕೂ ಜನ ಜಮಾಯಿಸಿ ಮೀನುಗಳನ್ನು ಆಯ್ದುಕೊಳ್ಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಸಾಮಾನ್ಯವಾಗಿ ತೀವ್ರವಾದ ಬಿಸಿಲು ಅಥವಾ ಉಷ್ಣಾಂಶ ಹೆಚ್ಚಾದಾಗ ಮೀನುಗಳು ತಂಪಾದ ವಾತಾವರಣ ಹುಡುಕುತ್ತಾ ಸಮುದ್ರದ ಆಳಕ್ಕೆ ಹೋಗುತ್ತವೆ. ಆದರೆ, ಅತೀವ ಶಾಖದ ನಡುವೆಯೂ ಭೂತಾಯಿ ಮೀನುಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ದಡಕ್ಕೆ ಬಂದಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮತ್ತು ಕುತೂಹಲ ಮೂಡಿಸಿದೆ.
ಸಮುದ್ರದ ಅಡಿಯಲ್ಲಿನ ನೀರಿನ ಪ್ರವಾಹದ ಬದಲಾವಣೆ ಅಥವಾ ಆಮ್ಲಜನಕದ ವ್ಯತ್ಯಯದಿಂದ ಹೀಗಾಗಿರಬಹುದು ಎನ್ನಲಾಗಿದೆ. ಮೀನುಗಳು ಹೀಗೆ ತೀರಕ್ಕೆ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.