ಮಂಗಳೂರು, ಫೆ. 24 (DaijiworldNews/TA): ಮದುವೆ ಸಮಾರಂಭಗಳಲ್ಲಿ ಅತಿಥಿಗಳಿಗೆ ಸಿಹಿ ತಿನಿಸುಗಳನ್ನು ನೀಡುವುದು ನಮ್ಮ ಸಂಪ್ರದಾಯದ ಭಾಗ. ಆದರೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಾಕ್ಸ್ ಹಾಗೂ ಪ್ಲಾಸ್ಟಿಕ್ ಕವರ್ಗಳಲ್ಲಿ ಸ್ವೀಟ್ ನೀಡುವ ವಾಡಿಕೆ ಹೆಚ್ಚಾಗಿದೆ. ಪರಿಸರ ಹಾನಿಯನ್ನು ಮನಗಂಡು, ವಿಭಿನ್ನ ಪ್ರಯತ್ನವೊಂದನ್ನು ಕಿನ್ನಿಗೋಳಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕಾಣಲಾಯಿತು.

ಸರಾಫ್ ಅಣ್ಣಪ್ಪಯ್ಯ ಆಚಾರ್ಯ ಸಭಾಭವನದಲ್ಲಿ ಶುಕ್ರವಾರ ನಡೆದ ರಕ್ಷಿತಾ ಹಾಗೂ ಮೂರ್ತಿ ಕೆ.ಆರ್. ಅವರ ವಿವಾಹದಲ್ಲಿ ಅತಿಥಿಗಳಿಗೆ ಹಾಳೆಯಿಂದ ತಯಾರಿಸಿದ ಸ್ವೀಟ್ ಬಾಕ್ಸ್ನಲ್ಲಿ ಸಿಹಿ ಖಾದ್ಯಗಳನ್ನು ವಿತರಿಸಲಾಯಿತು. ಪ್ಲಾಸ್ಟಿಕ್ ತ್ಯಾಜ್ಯ ದೊಡ್ಡ ಸಮಸ್ಯೆಯಾಗಿರುವ ಈ ಕಾಲಘಟ್ಟದಲ್ಲಿ, ಮದುವೆಯಂತಹ ಸಂತಸದ ಸಂದರ್ಭದಲ್ಲೂ ಪರಿಸರ ಕಾಳಜಿ ತೋರಬಹುದು ಎಂಬುದನ್ನು ಈ ಸಮಾರಂಭ ಸಾಬೀತುಪಡಿಸಿದೆ.