ಕಾರ್ಕಳ,ಫೆ. 25 (DaijiworldNews/AK): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕಾರ್ಕಳದ ಕುಕ್ಕುಂದೂರಿನಲ್ಲಿ ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಡೆದ ಕಿಸಾನ್ ಸಭಾ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಇದುವರೆಗೂ 26 ಕಂತಿನ ಹಣವನ್ನು 1.24 ಕೋಟಿ ಮಹಿಳೆಯರಿಗೆ ತಲಾ 52 ಸಾವಿರ ರೂಪಾಯಿಯಂತೆ ಹಾಕಿದ್ದೇವೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಸೀಟು ಗೆದ್ದಿಲ್ಲ, ಆದರೆ ಉಡುಪಿ ಜಿಲ್ಲೆಯಲ್ಲಿ ಅತಿಹೆಚ್ಚು ಗೃಹಲಕ್ಷ್ಮಿ ಫಲಾನುಭವಿಗಳು ಇದ್ದಾರೆ. ಇಡೀ ಕಾರ್ಕಳ ಕ್ಷೇತ್ರಾದ್ಯಂತ ಉದಯ್ ಕುಮಾರ್ ಅವರು ಮನೆ ಮನೆಗೆ ತಿರುಗಿ ಗೃಹಲಕ್ಷ್ಮಿ ಯೋಜನೆಯು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಿದ್ದಾರೆ ಎಂದು ಹೇಳಿದರು.
ದೇಶ ಕಂಡ ಉತ್ತಮ ರಾಜಕೀಯ ಪಟು ವೀರಪ್ಪ ಮೊಯ್ಲಿ ಅವರ ಜೀವನ ನಮಗೆಲ್ಲ ಮಾದರಿ. ಬಡ ಮಕ್ಕಳಿಗೆ ಅನುಕೂಲ ಆಗುವ ದೃಷ್ಟಿಯಿಂದ ಸಿಇಟಿ ಆರಂಭಿಸಿ ಇಡೀ ದೇಶಕ್ಕೆ ಮಾದರಿಯಾದಂತಹ ಆಡಳಿತವನ್ನು ನೀಡಿದರು. ಅವರು ಆರಂಭಿಸಿದ ಸಿಇಟಿಯೇ ಮುಂದೆ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ಆರಂಭಕ್ಕೆ ಮಾದರಿ ಆಯಿತು ಎಂದರು.