ಬಂಟ್ವಾಳ, ಮಾ. 21 (DaijiworldNews/AA): ಬಂಟ್ವಾಳ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೊಗೋಡಿ ಎಂಬಲ್ಲಿರುವ ಗ್ಯಾಸ್ ಪಂಪ್ ಏಜೆನ್ಸಿಯೊಂದರಲ್ಲಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಕಚೇರಿಯ ಸೊತ್ತುಗಳನ್ನು ಧ್ವಂಸಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಆಟೋ ರಿಕ್ಷಾ ಚಾಲಕನೊಬ್ಬನ ವಿರುದ್ಧ ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗ್ಯಾಸ್ ಪಂಪ್ ಏಜೆನ್ಸಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಕುನಲ್ ಭುಹ್ನಿಯಾ (27) ಎಂಬವರು ಎಂಬುವವರು ಈ ಬಗ್ಗೆ ದೂರು ನೀಡಿದ್ದಾರೆ. ಮಾರ್ಚ್ 20ರ ಶುಕ್ರವಾರ ಸಂಜೆ ಬಂಟ್ವಾಳದ ಸಜಿಪಮೂಡಾ ನಿವಾಸಿ ಅಫ್ರೀಝ್ (28) ಎಂಬಾತ ತನ್ನ ಆಟೋ ರಿಕ್ಷಾದಲ್ಲಿ ಏಜೆನ್ಸಿ ಆವರಣಕ್ಕೆ ಬಂದಿದ್ದ. ಈ ವೇಳೆ ಆರೋಪಿಯು ಏಕಾಏಕಿ ಕಚೇರಿಯೊಳಗೆ ನುಗ್ಗಿ, ಅಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನ್ ಎಂಬ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ. ನಂತರ ಹೊರಬಂದು ಗ್ಯಾಸ್ ಪಂಪ್ ಏಜೆನ್ಸಿಯ ಸೊತ್ತುಗಳಿಗೆ ಹಾನಿ ಮಾಡಿದ್ದಾನೆ. ಆರೋಪಿಯು ಸುಮಾರು ೪೮,೦೦೦ ರೂ. ಮೌಲ್ಯದ ನಷ್ಟ ಉಂಟು ಮಾಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣಾ ಅ.ಕ್ರ 36/2026 ಕಲಂ: 115(2), 287, 324(4), 351(2) 352 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.