ನೆಲ್ಯಾಡಿ, ಮಾ. 21 (DaijiworldNews/TA): ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ಸೀರೋ ಮಲಬಾರ್ ಯೂತ್ ಮೂವ್ಮೆಂಟ್ (ಎಸ್ಎಂವೈಎಂ) ವತಿಯಿಂದ "ಗ್ರೀನ್ ಸಿಟಿ – ಕ್ಲೀನ್ ಸಿಟಿ" ಅಭಿಯಾನದ ಅಂಗವಾಗಿ ನೆಲ್ಯಾಡಿ ಪೇಟೆ ಪ್ರದೇಶದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಹಾಗೂ ಗ್ರಾಮ ಪಂಚಾಯತ್ಗೆ ಡಸ್ಟ್ಬಿನ್ ಹಸ್ತಾಂತರಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಹೈವೇ ನಿರ್ಮಾಣ ಮತ್ತು ಕಿರಿದಾದ ರಸ್ತೆಗಳಿಂದಾಗಿ ನೆಲ್ಯಾಡಿ ಪೇಟೆಯಲ್ಲಿ ಸಂಗ್ರಹವಾಗಿದ್ದ ಕಸದ ರಾಶಿಯನ್ನು ಯುವಕರ ತಂಡವು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಸಮಾಜಕ್ಕೆ ಮಾದರಿಯಾದರು. ಈ ಸಂದರ್ಭದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್ಗೆ ಐದು ಡಸ್ಟ್ಬಿನ್ಗಳನ್ನು ಕೊಡುಗೆಯಾಗಿ ನೀಡಲಾಗಿದ್ದು, ಪಂಚಾಯತ್ ಆಡಳಿತಾಧಿಕಾರಿ ಜಯರಾಜ್ ಹಾಗೂ ಕಾರ್ಯದರ್ಶಿ ಭಾರತಿ ಅವರ ಸಮ್ಮುಖದಲ್ಲಿ ಪಂಚಾಯತ್ ಸಿಬ್ಬಂದಿಗಳು ಇವುಗಳನ್ನು ಸ್ವೀಕರಿಸಿದರು. ಕಾರ್ಯಕ್ರಮಕ್ಕೆ ಸೆಂಟ್ ಅಲ್ಫೋನ್ಸ ಚರ್ಚ್ ಧರ್ಮಗುರು ವಂದನೀಯ ಫಾ. ಶಾಜಿ ಮಾತ್ಯು ಅವರು ಚಾಲನೆ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಡಸ್ಟ್ಬಿನ್ಗಳನ್ನು ಸ್ವೀಕರಿಸಿದರು. ಈ ಅಭಿಯಾನದಲ್ಲಿ ಎಸ್ಎಂವೈಎಂ ಅಧ್ಯಕ್ಷ ತೋಮಸ್ ವಾಯಯಿಲ್ ಸೇರಿದಂತೆ ಯುವ ಮುಂದಾಳುಗಳಾದ ಅಬಿನ್, ಡಿನು, ನವೀನ್, ದಿಶಾ, ಸನೂಷ, ಅರ್ಚನಾ, ಅಲೀನಾ ಥೋಮಸ್, ಶಾನ್, ಜೈಸನ್ ಮತ್ತು ಜೋಯಲ್ ಅವರು ಸಾರಥ್ಯ ವಹಿಸಿದ್ದರು. ಚರ್ಚ್ ಪಾಲನ ಸಮಿತಿಯ ರಾಜೇಶ್, ಜೋನ್ಸನ್, ಜೋಯ್, ರೆಜಿ ಕೊಳಂಗರಾತ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಈ ಸಮಾಜಮುಖಿ ಕಾರ್ಯಕ್ಕೆ ನೆಲ್ಯಾಡಿಯ ಸಿರಿಯನ್ ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್, ಜಿನೋಯ್ (ರಿಯಾ ರಬ್ಬರ್ಸ್), ಸೀಗಲ್ ಟ್ರೇಡರ್ಸ್ ಸೇರಿದಂತೆ ಹಲವಾರು ಉದ್ಯಮಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಆರ್ಥಿಕ ಸಹಾಯ ನೀಡಿ ಸಹಕರಿಸಿದರು.