ಕಾಸರಗೋಡು, ಮಾ. 21 (DaijiworldNews/TA): ಬೂತ್ ಮಟ್ಟದ ಅಧಿಕಾರಿಯೋರ್ವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆ ಸಮೀಪದ ಮೊಗ್ರಾಲ್ ನಲ್ಲಿ ನಡೆದಿದೆ. ಮೊಗ್ರಾಲ್ ನ ಮುಹಮ್ಮದ್(32) ಸವಾದ್ ಮೃತಪಟ್ಟವರು. ಇವರು ಚೆರ್ಕಳ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕರಾಗಿದ್ದರು. ಸೇತುವೆ ಮೇಲೆ ಬೈಕ್ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶನಿವಾರ ಬೆಳಿಗ್ಗೆಯಿಂದ ಮನೆಯಿಂದ ನಾಪತ್ತೆಯಾಗಿದ್ದ ಸವಾದ್ ಗಾಗಿ ಮನೆಯವರು ಶೋಧ ನಡೆಸಿದ್ದು, ಈ ನಡುವೆ ಮೊಗ್ರಾಲ್ ಸೇತುವೆ ಮೇಲೆ ಸವಾದ್ ನ ಬೈಕ್ ಪತ್ತೆಯಾಗಿದೆ. ಬಳಿಕ ಕುಟುಂಬಸ್ಥರು ಹಾಗೂ ನಾಗರಿಕರು ಹುಡುಕಾಡಿದಾಗ ನದಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದರೂ ಆಗಲೇ ಮೃತಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು. ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಸಂಬಂಧಿಕರು ದೂರಿದ್ದಾರೆ.
ಮುಹಮ್ಮದ್ ಸವಾದ್ ಸಾವಿನ ಬಗ್ಗೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ವೈಯುಕ್ತಿಕ ಕಾರಣಗಳಿಂದ ಕೃತ್ಯ ನಡೆಸಿದ್ದಾಗಿ ಪೊಲೀಸರು ವರದಿ ಮಾಡಿರುವುದಾಗಿ , ಸಮಗ್ರ ತನಿಖೆಗೆ ಆದೇಶ ನೀಡಿರುವ ವುದಾಗಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ಅರ್ಹ ಎಲ್ಲಾ ಸೌಲಭ್ಯಗಳನ್ನು ಖಾತರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.