ಉಡುಪಿ, ಮಾ. 29 (DaijiworldNews/AA): ರಸ್ತೆ ಬದಿ ನಿಂತಿದ್ದ ಕಂಟೈನರ್ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಬೈಂದೂರು ತಾಲೂಕಿನ ನಾವುಂದದ ರಾಷ್ಡ್ರೀಯ ಹೆದ್ದಾರಿಯಲ್ಲಿ ಮಾ. 28ರಂದು ನಡೆದಿದೆ.


ಅಪಘಾತದಲ್ಲಿ ಬೆಂಗಳೂರು ಮೂಲದ ತಾಯಿ ಮಮತಾ(36) ಹಾಗೂ ಮಗಳು ಧೃತಿಕಾ (14) ಮೃತಪಟ್ಟಿದ್ದಾರೆ. ರಾಘು(40), ಜಾಹ್ನವಿ(12), ಚಾರ್ವಿ(10) ಕಿರಣ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರವಾಸಕ್ಕೆ ಬಂದಿದ್ದ ಈ ಕುಟುಂಬ ಉಡುಪಿ ಜಿಲ್ಲೆಯ ಹಲವು ಪ್ರವಾಸಿ ತಾಣಗಳ ಭೇಟಿ ನೀಡಿ ಗೋಕರ್ಣ- ಮುರುಡೇಶ್ವರಕ್ಕೆ ತೆರಳುತ್ತಿತ್ತು. ಈ ವೇಳೆ ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವಾಗ ಕಾರು ನಿಂತಿದ್ದ ಕಂಟೈನರ್ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳಾದ ರಾಘು, ಜಾಹ್ನವಿ ಹಾಗೂ ಚಾರ್ವಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮತ್ತೋರ್ವ ಗಾಯಾಳು ಕಿರಣ್ ಗೆ ಮಣಿಪಾಲದ ಆಸ್ಪತ್ರೆಯಲ್ಲಿ ಸಾಗಿಸಲಾಗಿದೆ.